ಕೋಲ್ಕತ್ತ (ಪಿಟಿಐ): ದೇಶದ ಆರ್ಥಿಕ ವೃದ್ಧಿ ದರ ಮತ್ತೆ ಗರಿಷ್ಠ ಮಟ್ಟಕ್ಕೆ ಮರಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಆಹಾರ ಹಣದುಬ್ಬರ ದರವು ನಿರಂತರವಾಗಿ ಏರಿಕೆಯ ಹಾದಿಯಲ್ಲಿದ್ದರೂ, ಆರ್ಥಿಕ ವೃದ್ಧಿ ದರ ಮಾತ್ರ ಬಿಕ್ಕಟ್ಟು ಪೂರ್ವದ ಗರಿಷ್ಠ ಮಟ್ಟ ಶೇಕಡ 9ಕ್ಕೆ ಮರಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ‘ಜಿಡಿಪಿ’ ಶೇ 8.9ನ್ನು ತಲುಪಿದ್ದು, ಈ ಪ್ರಮಾಣವೇ ಮುಂದುವರೆದರೆ ವರ್ಷದ ಅಂತ್ಯಕ್ಕೆ ಆರ್ಥಿಕತೆ ಗರಿಷ್ಠ ಪಥಕ್ಕೆ ಮರಳುವುದು ಖಚಿತ ಎಂದರು.
ಜಾಗತಿಕ ಆರ್ಥಿಕ ಹಿಂಜರಿತದ ಮೊದಲು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಶೇಕಡ 9ರಷ್ಟಿತ್ತು. 2008-09ನೇ ಸಾಲಿನಲ್ಲಿ ಬಿಕ್ಕಟ್ಟಿನಿಂದಾಗಿ ಇದು ಶೇ 6.7ಕ್ಕೆ ಇಳಿಯಿತು. ಆದರೆ 2009-10ನೇ ಸಾಲಿನಲ್ಲಿ ಮತ್ತೆ ಶೇ 7.4ಕ್ಕೆ ಏರಿಕೆ ಕಂಡಿತು. ಆರ್ಥಿಕ ದಿವಾಳಿತನದ ಭೀತಿಯಿಂದ ಐರ್ಲೆಂಡ್, ಯೂರೋಪ್ ಒಕ್ಕೂಟ ಮತ್ತು ಅಂತರ್ರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ನೆರವು ಕೇಳಿದೆ. ಆದರೆ ಈಗ ವಿಶ್ವ ಆರ್ಥಿಕ ವೃದ್ಧಿ ದರವೂ ಪ್ರಗತಿ ಕಾಣುವ ನಿರೀಕ್ಷೆ ಇದೆ. ಪಾಶ್ಚಾತ್ಯ ದೇಶಗಳ ಆರ್ಥಿಕ ಬೆಳವಣಿಗೆಗಳು ಭಾರತದ ಆರ್ಥಿಕತೆಯ ಮೇಲೆ ಅಲ್ಪ ಮಟ್ಟಿಗಿನ ಪರಿಣಾಮ ಬೀರಿದರೂ, ಇದು ಬೇಗನೆ ಚೇತರಿಕೆ ಕಾಣಲಿದೆ ಎಂದರು.
ಹಣದುಬ್ಬರ ನಿಯಂತ್ರಿಸಲು ಸರ್ಕಾರ ಅಗತ್ಯ ವಸ್ತುಗಳ ಮೇಲಿನ ಆಮದು ಸುಂಕವನ್ನು ತೆಗೆದು ಹಾಕಿದೆ. ಷೇರುಪೇಟೆಯಲ್ಲಿ ವಿದೇಶಿ ವಿತ್ತೀಯ ಹೂಡಿಕೆಯಲ್ಲಿ ರಭಸ ಕಂಡುಬರುತ್ತಿದ್ದು, 2010ರಲ್ಲಿ ಇದು 18 ಶತಕೋಟಿ ಡಾಲರ್ಗಳಿಂದ (್ಙ 82,800 ಕೋಟಿ) 39 ಶತಕೋಟಿ ಡಾಲರ್ಗಳಿಗೆ (್ಙ1,79,400ಕೋಟಿ) ಏರಿದೆ. ‘ಐಎಂಎಫ್’ ಕೂಡ ಭಾರತದ ಆರ್ಥಿಕ ವೃದ್ಧಿ ದರ 2010-11ರಲ್ಲಿ ಶೇಕಡ 8.8 ತಲುಪಲಿದೆ ಎಂದು ಅಂದಾಜಿಸಿದೆ ಎಂದರು.