ನರಗುಂದ: ಉತ್ತರಾಖಂಡ ಪ್ರವಾಹದ ಸಂತ್ರಸ್ತರ ರಕ್ಷಣೆಗೆ ತೆರಳಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ತಾಲ್ಲೂಕಿನ ಜಗಾಪುರದ ಯೋಧ ಬಸವರಾಜ ಯರಗಟ್ಟಿಯವರ ಹೆಸರಿನಲ್ಲಿ ಜಗಾಪುರ ಗ್ರಾಮದಲ್ಲಿ ವೀರ ಸೌಧ ನಿರ್ಮಿಸಲಾಗುವುದು ಎಂದು ಜಿ.ಪಂ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.
ಗ್ರಾಮದಲ್ಲಿ ಇತ್ತೀಚೆಗೆ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವೀರ ಸೌಧ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ 10 ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗುವುದು. 10 ಲಕ್ಷ ರೂಪಾಯಿಗಳಲ್ಲಿ ಬಸವರಾಜ ಯರಗಟ್ಟಿಯವರ ಪುತ್ಥಳಿ ನಿರ್ಮಾಣದೊಂದಿಗೆ ವೀರರನ್ನು ನೆನಪಿಸುವ ಆಕರ್ಷಕ ಸೌಧ ನಿರ್ಮಿಸಿ ಸುತ್ತಲೂ ರಕ್ಷಾ ಕವಚ ಹಾಕಲಾಗುವುದು.
ಯೋಧ ಬಸವರಾಜನ ಕುಟುಂಬದ ಸದಸ್ಯರಿಗೆ ಸಿಗಬೇಕಾದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಚಂದ್ರು ದಂಡಿನ, ಗೋವಿಂದರೆಡ್ಡಿ ಸಿದ್ನಾಳ, ಎಂ.ಐ. ಮೇಟಿ, ಅನಿಲ ಧರಿಯನ್ನವರ, ಎ.ಎಂ. ಹುಡೇದ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.
ಬಣಗಾರ ಸಮಾಜದಿಂದ ಪ್ರತಿಭಾ ಪುರಸ್ಕಾರ
ಗದಗ: ಅಖಿಲ ಭಾರತ ಬಣಗಾರ ಸಮಾಜ ಸಂಘದ ಆಶ್ರಯದಲ್ಲಿ ಆ. 12ರಂದು ಜಡೆ ಶಂಕರಲಿಂಗ ಕ್ಷೇತ್ರ ನವಲಿಯಲ್ಲಿ ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾಜದ ಚುನಾಯಿತ ಪ್ರತಿನಿಧಿಗಳು ಹಾಗೂ ಎಸ್ಎಸ್ಎಲ್ಸಿ ನಂತರ ವ್ಯಾಸಾಂಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಇದೇ 12 ರ ಒಳಗಾಗಿ ಎರಡು ಭಾವಚಿತ್ರದೊಂದಿಗೆ ದಾನಪ್ಪ ತಡಸದ 9886368620 ಅವರಲ್ಲಿ ಅರ್ಜಿ ಸಲ್ಲಿಸಲು ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಶಿವಶಿಂಪಗೇರ ತಿಳಿಸಿದ್ದಾರೆ.