ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅವಿಶ್ವಾಸ ನಿರ್ಣಯ ಮಂಡಿಸಲ್ಲ: ಎಂ.ಆಂಜನಪ್ಪ

Last Updated 9 ಜನವರಿ 2014, 6:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಲ್ಲಿ ಇತ್ತೀಚೆಗೆ ಕೆಲ ದಿನಗಳಿಂದ ಇದ್ದ ಅಸಮಾಧಾನವನ್ನು ನಿವಾರಿಸಿ­ದ್ದೇವೆ. ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದ 12 ಮಂದಿ ಸದಸ್ಯರೊಂದಿಗೆ ಸುದೀರ್ಘ ಮಾತುಕತೆ ನಡೆಸಲಾಗಿದ್ದು, ಅವರು ನಿರ್ಣಯ ಮಂಡನೆ ಮಾಡದಿರಲು ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ತಿಳಿಸಿದರು.

ಅಧ್ಯಕ್ಷ ಎಸ್‌.ಎನ್‌.ಚಿನ್ನಪ್ಪ, ಉಪಾ­ಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್‌ ಮತ್ತು ಸದಸ್ಯರ ವಿರುದ್ಧ ಬೇರೆ ಬೇರೆ ಕಾರಣಗಳಿಂದಾಗಿ ಅಸಮಾಧಾನ ಹೊಗೆಯಾಡುತ್ತಿತ್ತು. ಅದನ್ನೇ ನೆಪವಾಗಿಸಿಕೊಂಡ 12 ಮಂದಿ ಸದಸ್ಯರು ಹೆದರಿಸುವ ಉದ್ದೇಶದಿಂದ ಅವಿಶ್ವಾಸ ನಿರ್ಣಯ ಮಾಡುತ್ತೇವೆ­ಎಂದು ಹೇಳಿದರೆ ಹೊರತು ದುರುದ್ದೇಶದಿಂದಲ್ಲ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯತಿಯಲ್ಲಿ 15 ಮಂದಿ ಕಾಂಗ್ರೆಸ್‌ನವರಿದ್ದು, ಇನ್ನೂ 5 ಮಂದಿ ಪಕ್ಷೇತರರು ಎಂಬಂತೆ ಬಿಂಬಿಸ­ಲಾಗಿತ್ತು. ಆದರೆ ಉಳಿದ ಐವರು ಕೂಡ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ­ದ್ದಾರೆ. ಕಾಂಗ್ರೆಸ್‌ ಬಲ ಇನ್ನಷ್ಟು ಹೆಚ್ಚಾಗಿದ್ದು, ಇದನ್ನು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಜನಸಾಮಾನ್ಯರ ಸಮಸ್ಯೆ ನಿವಾರಣೆಗೆ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿ ಹೇಳಲಾಯಿತು. 12 ಮಂದಿ ಸದಸ್ಯರು ಅದಕ್ಕೆ ಒಪ್ಪಿಗೆ ಸೂಚಿಸಿದರು ಎಂದು ಅವರು ತಿಳಿಸಿದರು.

ಇಷ್ಟೆಲ್ಲ ಮನವರಿಕೆ ಮಾಡಿಕೊಟ್ಟ ನಂತರವೂ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮತ್ತು ಜಿಲ್ಲಾ ಪಂಚಾಯತಿಯನ್ನು ಅಸ್ಥಿರಗೊಳಿಸಲು ಕೆಲವರು ಪ್ರಯತ್ನಿಸಿದಲ್ಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸ­ಲಾಗುವುದು. ಅವರನ್ನು ಪಕ್ಷದಿಂದಲೇ ಉಚ್ಚಾಟಿಸುವಂತಹ ಕ್ರಮ ಕೈಗೊಳ್ಳಲು ಹೇಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ಸದಸ್ಯರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿ­ದರು. ಮಾಜಿ ಶಾಸಕ ಎಂ.ಶಿವಾನಂದ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್‌.ಎನ್.­ಚಿನ್ನಪ್ಪ, ಉಪಾಧ್ಯಕ್ಷ ಪಿ.ವಿ.­ರಾಘವೇಂದ್ರ ಹನುಮಾನ್‌, ಸದಸ್ಯ ಎಂ.ವಿ.ಕೃಷ್ಣಪ್ಪ,  ಮುಖಂಡ ಲಾಯರ್‌ ನಾರಾಯಣ­ಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT