ಬಳ್ಳಾರಿ: ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮರುದಿನವೇ ರಾಜೀನಾಮೆ ಸಲ್ಲಿಸಿದ್ದ ಕಾಂಗ್ರೆಸ್ನ ಮಮತಾ ಸುರೇಶ್ ತಮ್ಮ ರಾಜೀನಾಮೆ ಅಂಗೀಕಾರ ಆಗದ್ದರಿಂದ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
`ಅಕ್ಟೋಬರ್ 26ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ನಾನು, ಕೆಲವು ಆರೋಪಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ಆದರೆ, ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಅಧಿಕಾರ ಸ್ವೀಕರಿಸಿದ್ದೇನೆ~ ಎಂದು ಅವರು ತಿಳಿಸಿದರು.
`ನಾನು ನೀಡಿದ್ದ ಈ ರಾಜೀನಾಮೆ ಅಂಗೀಕಾರವಾಗದೇ, ತಿರಸ್ಕೃತ ಗೊಂಡಿದ್ದು, ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ~ ಎಂದು ಅವರು ಹೇಳಿದರು.
ಜಿ.ಪಂ. ಸದಸ್ಯರಾದ ಗೋನಾಳ್ ರಾಜಶೇಖರಗೌಡ, ಭೀಮಾ ನಾಯ್ಕ, ಕಾಂಗ್ರೆಸ್ ಮುಖಂಡ ಅಕ್ಕಿ ತೋಟೇಶ್, ಹರ್ಷವರ್ಧನ್, ಬಿಎಸ್ಆರ್ ಕಾಂಗ್ರೆಸ್ನ ಕೆ.ಬಸವರಾಜ್, ಜಿ.ಪಂ. ಮಾಜಿ ಅಧ್ಯಕ್ಷ ರುದ್ರಗೌಡ ಮಮತಾ ಅವರಿಗೆ ಶುಭ ಕೋರಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಬದಲಿಗೆ, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಮಂಗಲಮ್ಮ ಅವರಿಗೆ ಮತ ನೀಡಿ, ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದರಿಂದ ಕಾಂಗ್ರೆಸ್ ಮುಖಂಡರು ಸಿಡಿಮಿಡಿಗೊಂಡಿದ್ದರಿಂದ ಮಮತಾ ಅವರು ಉಪಾಧ್ಯಕ್ಷ ಸ್ಥಾನ ಅಲಂಕರಿಸುವ ಮುನ್ನವೇ ರಾಜೀನಾಮೆ ಸಲ್ಲಿಸಿದ್ದರು. ಚುನಾವಣೆಯಲ್ಲಿ ಇವರು ಕೈಗೊಂಡ ನಿರ್ಣಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.