ಹಾವೇರಿ: ಕ್ರೀಡಾಪಟುಗಳ ಪ್ರೋತ್ಸಾಹಿ ಸಲು ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆ, ಕೇಕೆ, ಗೆಲುವಿಗಾಗಿ ಕ್ರೀಡಾಪಟುಗಳ ಮಾತು ಕತೆ, ಚರ್ಚೆ, ತರಬೇತುದಾರರ ಸಲಹೆ, ಸೂಚನೆ, ನಿರ್ಣಾಯಕ ಸೀಟಿ, ಅಂಕಗಳ ಅನೌನ್ಸ್ಮೆಂಟ್, ಗೆದ್ದ ಕ್ರೀಡಾಪಟುಗಳ ಸಂಭ್ರಮದ ಚೀರಾಟ, ಕೂಗಾಟ ಹೀಗೆ ನಾಲ್ಕು ದಿನಗಳ ಶಬ್ದಗಳಿಂದ ಗುಂಯ ಗುಡುತ್ತಿದ್ದ ಜಿಲ್ಲಾ ಕ್ರೀಡಾಂಗಣದಲ್ಲಿ ಈಗ ನೀರವ ಮೌನ ಆವರಿಸಿದೆ.
ಇದೇ ಮೊದಲ ಬಾರಿಗೆ ಕಳೆದ ನಾಲ್ಕು ದಿನಗಳ ಕಾಲ ನಡೆದ 39ನೇ ರಾಷ್ಟ್ರೀಯ ಮಟ್ಟದ ಮಹಿಳಾ ಪೈಕಾ ಕ್ರೀಡಾಕೂಟ ಶನಿವಾರ ಮುಕ್ತಾಯ ಗೊಂಡಿತು. ಪ್ರಶಸ್ತಿ ಪಡೆದು ಸಂಭ್ರಮಿ ಸಿದ ಕ್ರೀಡಾಪಟುಗಳು ಖುಷಿಯಿಂದಲೇ ಜೈ ಹಾವೇರಿ ಎಂದು ಊರಿಗೆ ವಾಪ ಸ್ಸಾಗಿದ್ದರೆ, ಪ್ರೇಕ್ಷಕರು ಕ್ರೀಡಾಕೂಟ ಎಷ್ಟು ಬೇಗ ಮುಗಿಯಿತು ಎನ್ನುವ ಬೇಸರದ ಮಾತುಗಳಿಂದಲೇ ಮನೆ ಕಡೆಗೆ ಹೆಜ್ಜೆ ಹಾಕಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಎಂದು ಕಾಣದಷ್ಟು ಜನರು ಜಮಾಯಿ ಸಿದ್ದಲ್ಲದೇ, ನಾಲ್ಕು ದಿನಗಳ ಆಟ ಗಾರರು, ಅಧಿಕಾರಿಗಳು, ಕ್ರೀಡಾಭಿಮಾ ನಿಗಳಿಂದ ಇಡೀ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ಕೇವಲ ಹನ್ನೆರಡು ಗಂಟೆ ಸರಿದು ಹೋಗಿದೆ. ಬಾನುವಾರ ಕ್ರೀಡಾಂಗಣ ಅಕ್ಷರಶಃ ಏಕಾಂಗಿಯಾ ಗಿದೆ. ಜನರೇ ಇಲ್ಲದೇ ಬಿಕೋ ಎನ್ನುತ್ತಿದೆ.
ರಸದೌತಣ: ಮೊದಲ ಬಾರಿಗೆ ಆಯೋಜನೆಯಾಗಿದ್ದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವು ನಗರದ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿತು. ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಕ್ರೀಡಾ ಪಟುಗಳಿಗೆ ಕ್ರೀಡಾಸ್ಪೂರ್ತಿ ತುಂಬುವಲ್ಲಿ ಯಶಸ್ವಿಯಾಯಿತು.
ಜಿಲ್ಲೆಯ ಬೇರೆ ಬೇರೆ ತಾಲ್ಲೂಕು, ಗ್ರಾಮಗಳಿಂದ ಕ್ರೀಡಾಸಕ್ತರು, ಸಾರ್ವ ಜನಿಕರು ಟ್ರ್ಯಾಕ್ಟರ್, ಟಂಟಂ ಮತ್ತಿತರ ವಾಹನಗಳ ಮೂಲಕ ತಂಡೋಪ ತಂಡವಾಗಿ ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದರು. ಅದರಲ್ಲೂ ರಾಜ್ಯದ ತಂಡದ ಆಟಗಾರರ ಪ್ರತಿ ಯಶಸ್ಸಿ ನಲ್ಲಿಯೂ ಅವರನ್ನು ಪ್ರೋತ್ಸಾಹಿಸಿ ಕ್ರೀಡಾಭಿಮಾನ ಮೆರೆದಿದ್ದರು. ಕ್ರೀಡಾ ಕೂಟ ಮುಕ್ತಾಯಗೊಳ್ಳುತ್ತಿದ್ದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಹಂದಿಗಳ ಹೊರತಾಗಿ ಬೇರೆನೂ ಕಾಣ ಸಿಗುವುದಿಲ್ಲ.
ಸಿದ್ದಪ್ಪನ ನೆನಹು: ಜಿಲ್ಲಾ ಕೇಂದ್ರವಾಗಿ 15 ವರ್ಷ ಕಳೆದಿದೆ. ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಿ 10–12 ವರ್ಷಗಳು ಸರಿದಿವೆ. ಈ ಕ್ರೀಡಾಂಗಣ ದಲ್ಲಿ ಸಾಕಷ್ಟು ಬಾರಿ ರಾಜ್ಯ ಮಟ್ಟದ ಕ್ರೀಡಾಕೂಟಗಳು ನಡೆದಿವೆ. ಯಾವ ಸಂದರ್ಭದಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗೆಯ ಕೊಡುಗೆ ನೀಡಿದ ಹೊಸಮನಿ ಸಿದ್ದಪ್ಪನವರ ನೆನಹು ಮಾತ್ರ ಮಾಡಿರಲಿಲ್ಲ. ಇದೇ ಪ್ರಥಮ ಬಾರಿಗೆ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟವು ಹೊಸಮನಿ ಸಿದ್ದಪ್ಪನ ವರನ್ನು ನೆನೆಸುವಂತೆ ಮಾಡಿತಲ್ಲದೇ, ಅವರ ಹೆಸರನ್ನೇ ಜಿಲ್ಲಾ ಕ್ರೀಡಾಂಗಣಕ್ಕೆ ಇರುವ ಕುರಿತು ಚಿಂತನೆ ಮಾಡಲು ಹಚ್ಚಿತು.
ಕಳೆಗುಂದಿದ ವ್ಯಾಪಾರ: ಕಳೆದ ನಾಲ್ಕು ದಿನಗಳ ಕಾಲ ಕ್ರೀಡಾಕೂಟ ನಡೆ ದಿದ್ದರಿಂದ ಆಟಗಾರ್ತಿಯರು, ಅಧಿಕಾರಿ ಗಳು ಹಾಗೂ ಕ್ರೀಡಾಸಕ್ತರು ಕ್ರೀಡಾಂಗಣದಲ್ಲಿ ಬೀಡು ಬಿಟ್ಟಿದ್ದರಿಂದ ಮೈದಾನದ ಹೊರಗಡೆ ಮಾಡುತ್ತಿದ್ದ ಡಬ್ಬಾ ಅಂಗಡಿಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ಆಗಿತ್ತು. ಗೋಬಿ ಮಂಚೂರಿ, ಪಾನಿಪುರಿ, ಐಸ್ಕ್ರೀಂ ವ್ಯಾಪಾರಿಗಳಿಗೆ ಕ್ರೀಡಾಕೂಟದಿಂದ ನಿತ್ಯದ ವ್ಯಾಪಾರಕ್ಕಿಂತ ಹತ್ತು ಪಟ್ಟು ಹೆಚ್ಚಾಗಿತ್ತು. ಈಗ ಕ್ರೀಡಾಕೂಟ ಮುಗಿ ದಿದೆ. ವ್ಯಾಪಾರ ಕೂಡಾ ಮಾಮೂ ಲಿಯಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.
‘ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಕೇವಲ ಮಾಧ್ಯಮಗಳಲ್ಲಿ ಓದಿ ಹಾಗೂ ನೋಡಿ ತಿಳಿದುಕೊಳ್ಳುತ್ತಿದ್ದೇವು. ಈಗ ನಮ್ಮ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದ್ದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ತಾಲ್ಲೂ ಕಿನ ನಾಗನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಹೊಳೆಯಪ್ಪ ಸೂರದ ಹಾಗೂ ಗ್ರಾಮಸ್ಥ ಗುಡ್ಡಪ್ಪ ಬೇವಿನ ಕಟ್ಟಿ. ‘ಕ್ರೀಡಾಕೂಟಗಳು ಇನ್ನೂ ಎರಡು ದಿನಗಳ ಕಾಲ ನಡೆದಿದ್ದರೆ ಚೆನ್ನಾಗಿರು ತ್ತಿತ್ತು. ಬೇಗೆನೆ ಮುಗಿದಿದ್ದು ಬೆಸರ ತರಿಸಿದೆ. ಇಂಥ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಹೆಚ್ಚೆಚ್ಚು ನಮ್ಮ ಜಿಲ್ಲೆ ಯಲ್ಲಿ ನಡೆದಾಗ ಹಾವೇರಿ ಜಿಲ್ಲೆಯು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.