ಚಿತ್ರದುರ್ಗ: ಸ್ತ್ರೀಶಕ್ತಿ ಹಾಗೂ ಇತರೆ ಮಹಿಳಾ ಸ್ವಸಹಾಯ ಸಂಘಗಳು ಉತ್ಪಾದಿಸಿದ ವಸ್ತುಗಳ `ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ 2011-12~ಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಈ ಮೇಳವನ್ನು ನಗರದ ಗಾಯತ್ರಿ ವೃತ್ತದಲ್ಲಿರುವ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು, ಜ. 5ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದೆ.
ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳು, ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಉದ್ಯಮಿಗಳು ಹಾಗೂ ಮಹಿಳಾ ಮಂಡಳಿಗಳು ತಯಾರಿಸಿರುವ ವಿವಿಧ ವಸ್ತುಗಳು ಮೇಳದಲ್ಲಿ ಮಾರಾಟಕ್ಕಿವೆ. ಒಟ್ಟು 76 ಗುಂಪುಗಳು ಮೇಳದಲ್ಲಿ ಪಾಲ್ಗೊಂಡಿವೆ. ಚಿತ್ರದುರ್ಗ ತಾಲ್ಲೂಕಿನ 30, ಚಳ್ಳಕೆರೆಯ 10, ಹೊಳಲ್ಕೆರೆಯ 9, ಮೊಳಕಾಲ್ಮುರಿನ 5, ಹಿರಿಯೂರಿನ 5, ಹೊಸದುರ್ಗ ತಾಲ್ಲೂಕಿನ 5 ಹಾಗೂ ಇತರೆ ಜಿಲ್ಲೆಗಳ 12 ಗುಂಪುಗಳು ಪಾಲ್ಗೊಂಡಿವೆ.
ಸಿದ್ಧ ಉಡುಪುಗಳು, ಕರಕುಶಲ ವಸ್ತುಗಳು, ಗೃಹಾಲಂಕಾರ ವಸ್ತುಗಳು, ಖಾದ್ಯ ಪದಾರ್ಥಗಳು, ಆಭರಣಗಳು, ಅಲೊವೆರಾ ಉತ್ಪನ್ನಗಳು, ಗಿಡಮೂಲಿಕೆಗಳು ಮತ್ತು ಸೌಂದರ್ಯ ವರ್ಧಕಗಳು ಹಾಗೂ ಗೃಹೋಪಯೋಗಿ ವಸ್ತುಗಳು, ಹಪ್ಪಳ, ಸಂಡಿಗೆ, ಚಟ್ನಿಪುಡಿ, ಮರದ ಆಟಿಗೆ ಸಾಮಾನುಗಳು, ಬೆಟ್ಟದ ನೆಲ್ಲಿಕಾಯಿ, ಸಾವಯವ ಉತ್ಪನ್ನಗಳು, ಗೃಹಿಣಿಯರು ನೇಯ್ದಿರುವ ವಿವಿಧ ಬಟ್ಟೆಗಳು ಮೇಳದಲ್ಲಿವೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ ಮಾರಾಟ ಮೇಳಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಜೆ. ರಂಗಸ್ವಾಮಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ. ಅನಿತಾ ಬಸವರಾಜ್, ಜಿ.ಪಂ. ಸದಸ್ಯ ರಮೇಶ್ ಮತ್ತಿತರರು ಹಾಜರಿದ್ದರು.