ಹಗರಿಬೊಮ್ಮನಹಳ್ಳಿ: ಪಟ್ಟಣದ ರೇಣುಕ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 17ರಂದು ಬಳ್ಳಾರಿ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಜಿ.ಲಕ್ಷ್ಮೀಪತಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಮ್ಮೇಳನ ನಡೆಸಲು ಅನುವು ಮಾಡಿಕೊಟ್ಟ ಹಿನ್ನೆಲೆ ಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಗುರುಮೂರ್ತಿ ಪೆಂಡಕೂರು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ತಾಲ್ಲೂಕಿನ ಸುಕ್ಷೇತ್ರ ನಂದೀಪುರ ಮಹೇಶ್ವರ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಲಿದ್ದು, ಎಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಉಪಸ್ಥಿತರಿರುತ್ತಾರೆ ಎಂದರು.
ಸಮ್ಮೇಳನದ ಅಂಗವಾಗಿ, ವಚನ ಚಿಂತನಗೋಷ್ಠಿ ಆಯೋಜಿಸಿದ್ದು ಡಾ.ಮೃತ್ಯುಂಜಯ ರುಮಾಲೆ ಜೇಡರ ದಾಸಿಮಯ್ಯ ವಚನಗಳ ಕುರಿತು, ಡಾ.ರಾಜಶೇಖರ ಜಮದಂಡಿ ಬಸವಣ್ಣನವರ ವಚನಗಳ, ಪತ್ರಕರ್ತ ಸಿದ್ಧರಾಮ ಹಿರೇಮಠ ಅಮುಗೆ ರಾಯಮ್ಮನವರ ವಚನಗಳ ಮತ್ತು ಡಾ.ಎಚ್.ಎಂ.ಚಂದ್ರಶೇಖರ ಶಾಸ್ತ್ರಿ ಆಯ್ದಕ್ಕಿ ಲಕ್ಕಮ್ಮನವರ ವಚನಗಳ ಕುರಿತು ಚಿಂತನೆ ಮಂಡಿಸಲಿದ್ದಾರೆ.
ರೇಣುಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಪಿ.ಇಂದುಮತಿ ಗೋಷ್ಠಿಯ ಅಧ್ಯಕ್ಷತೆ ವಹಿಸುತ್ತಾರೆ.
ನಂತರ ಯಲ್ಲಪ್ಪ ದರೋಜಿ ಅವರ ಅಧ್ಯಕ್ಷತೆಯಲ್ಲಿ ಸ್ವರಚಿತ ವಚನಗೋಷ್ಠಿ ನಡೆಯಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ ಸೇರಿದಂತೆ ಎಂ. ನಾಗರಾಜ, ಆರ್.ಷಣ್ಮುಖಯ್ಯ, ಎಂ. ಶಿವಯೋಗಿ, ರಾಗಿ ಶರಣಬಸವಯ್ಯ, ಇಟಗಿ ಈರಣ್ಣ, ಬಿ.ಎಸ್.ಚನ್ನವೀರಪ್ಪ, ಕಾಲಜ್ಞಾನಿ ಬಿ.ಗೋಪಾಲರಾವ್ ಮತ್ತು ಜಂಬಯ್ಯಸ್ವಾಮಿ ಅವರನ್ನು ವಚನಗಳ ವಾಚನಕ್ಕೆ ಆಹ್ವಾನಿಸಲಾಗಿದೆ. ಇದೇ ವೇಳೆ ಆರ್.ಷಣ್ಮುಖಪ್ಪ ಮತ್ತು ಹೇಮಲತಾ ಕುಲಕರ್ಣಿ ವಚನ ಗಾಯನ ನಡೆಸಿಕೊಡುತ್ತಾರೆ.
ಡಾ.ಫ.ಗು.ಹಳಕಟ್ಟಿ ಪ್ರತಿಷ್ಠಾಪನದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಂ. ಪಾಟೀಲ್ ಸಂಜೆ ಸಮಾರೋಪ ಭಾಷಣ ಮಾಡಲಿದ್ದು, ವಚನ ಸಂಸ್ಕೃತಿಗೆ ಕೊಡುಗೆ ನೀಡಿರುವ ಡಾ.ಕೆ.ರವೀಂದ್ರನಾಥ್, ಹಾಗೂ ಡಾ.ಬಸವರಾಜ ಸಬರದ ಅವರನ್ನು ಈ ಸಂದರ್ಭದಲ್ಲಿ ಗೌರವಿಸ ಲಾಗುತ್ತದೆ ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷ ಗುರುಮೂರ್ತಿ ಪೆಂಡಕೂರು, ಅಮರನಾಥ ಚಿದ್ರಿ, ಪರಮೇಶ್ವರಯ್ಯ ಸೊಪ್ಪಿಮಠ, ಎಲ್. ರೆಡ್ಡಿ ನಾಯ್ಕ ಹಾಗೂ ಮಜ್ಗಿ ವೀರೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.