ಕೋಲಾರ: ಗೃಹಿಣಿ ವೀಣಾ ಮತ್ತು ಅವರ ಮಗಳು ದೀಪ್ತಿಯ ಸಾವಿಗೆ ಕಾರಣನಾದ ಪತಿ ಸಂತೋಷ್ ಕುಮಾರ್ನನ್ನು ಬಂಧಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೋಲಾರದ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.
ಗೃಹಿಣಿ ಸಾವಿನ ಹಿನ್ನೆಲೆಯಲ್ಲಿ ಜಾಮೀನು ಪಡೆದಿರುವ ಇತರೆ ಆರೋಪಿಗಳ ಆಸ್ತಿಯನ್ನು ಮುಟು್ಟಗೋಲು ಹಾಕಿಕೊಳ್ಳಬೇಕು. ದೂರುದಾರರ ಕಾರನ್ನು ದುರ್ಬಳಕೆ ಮಾಡಿಕೊಂಡಿರುವ ನಗರ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ರಮೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು. ದೂರು ದಾಖಲಾಗಿ ಎರಡು ತಿಂಗಳಾದರೂ ಕ್ರಮ ವಹಿಸಿದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರಮುಖ ರಸೆ್ತಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿದರು. ಧರಣಿ ಸ್ಥಳಕ್ಕೆ ಬಂದವರೇ ಏಕಾಏಕಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಸಲುವಾಗಿ ಓಡಲಾರಂಭಿಸಿದರು. ಆ ಸಂದರ್ಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಹೆಚ್ಚಿನ ಕಾರ್ಯಕರ್ತರನ್ನು ತಡೆಯಲು ಹರಸಾಹಸ ಮಾಡಿದರು. ಪೊಲೀಸರನ್ನು ದಾಟಿ ಹೋದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯೊಳಕ್ಕೆ ನುಗ್ಗಿ ಧರಣಿ ಕುಳಿತರು.
ಪ್ರಕರಣದಲ್ಲಿ ಜಾಮೀನು ಪಡೆದಿರುವವರು ನಾಪತ್ತೆಯಾಗಿರುವ ಪ್ರಮುಖ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದರಿಂದ ಅವರ ಜಾಮೀನನ್ನು ರದ್ದುಗೊಳಿಸಿ ಪೊಲೀಸ್ ವಶಕ್ಕೆ ನೀಡುವಂತೆ ನಾ್ಯಯಾಲಯಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಆರೋಪಿಗಳು ಮತ್ತು ಅವರ ಆಪ್ತರು, ಸಂಬಂಧಿಕರ ಆಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಮಕ್ಕೆ ಆಗ್ರಹ: ಜು.10ರಂದು ನಗರ ಠಾಣೆಯಲ್ಲಿ ದೂರು ದಾಖಲಾದರೂ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿಲ್ಲ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೂ ಕೂಡಲೇ ಬಂಧಿಸದೆ, ಅವರಿಗೆ ಜಾಮೀನು ಪಡೆಯುವ ಅವಕಾಶ ಸಿಗುವಂತೆ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ಪ್ರಮುಖ ಆರೋಪಿಯನ್ನು ಪತ್ತೆ ಮಾಡುವ ಭರವಸೆ ನೀಡಿ ದೂರುದಾರರ ಕಾರಿನಲ್ಲೇ ನಗರ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ರಮೇಶ್ ಸಂಚರಿಸಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ಕರ್ತವ್ಯಲೋಪದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
18ರಂದು ಬಂದ್: ಒಂದು ವಾರದೊಳಗೆ ಪ್ರಮುಖ ಆರೋಪಿಯನ್ನು ಬಂಧಿಸದಿದ್ದರೆ ಸೆ.18ರಂದು ಕೋಲಾರ ಬಂದ್ ನಡೆಸಲಾಗುವುದು. ಆ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮನವಿ ಪಡೆದ ಜಿಲ್ಲಾಧಿಕಾರಿ ಡಿ.ಕೆ.ರವಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಸಿಪಿಐಎಂನ ಜಿ.ಸಿ.ಬಯ್ಯಾರೆಡ್ಡಿ, ಜಿ.ಅರ್ಜುನನ್, ವೆಂಕಟರಮಣ, ಸಮತಾ ಸೈನಿಕ ದಳದ ಪಂಡಿತ್ ವೆಂಕಟಮುನಿಯಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಜಯಕುಮಾರ್, ಶ್ರೀನಿವಾಸನ್, ಮಹಿಳಾ ಸಂಘಟನೆಯ ಈಶ್ವರಮ್ಮ, ನಾಗರತ್ನಮ್ಮ, ಮುನಿರಾಜಮ್ಮ, ಗಂಗಮ್ಮ, ಜಯಲಕ್ಷ್ಮಮ್ಮ, ಪ್ರಾಂತ ರೈತ ಸಂಘದ ನಾರಾಯಣರೆಡ್ಡಿ, ಪಿ.ಆರ್.ಸೂರ್ಯನಾರಾಯಣ, ಡಿವೈಎಫ್ಐನ ವಿಜಯಕೃಷ್ಣ, ಮಂಜುನಾಥ, ಬಿ.ವಿ.ಸಂಪಂಗಿ. ಎಸ್ಎಫ್ಐನ ಅಂಬರೀಶ್, ಅಮರೇಶ್, ವಾಸುದೇವ ರೆಡ್ಡಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.