ಬಳ್ಳಾರಿ: ಅಕ್ರಮ ಗಣಿಗಾರಿಕೆ ಕುರಿತ ತನಿಖೆಯ ಅಂಗವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅಧ್ಯಯನ ನಡೆಸುತ್ತಿರುವ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಸದಸ್ಯರು, ಸೋಮವಾರ ನರದಲ್ಲಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಭಾನುವಾರ ಸಂಜೆ ಜಿಲ್ಲೆಯ ಹೊಸಪೇಟೆಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಸಿಇಸಿ ತಂಡದ ಮುಖ್ಯಸ್ಥ ಜಯ ಕೃಷ್ಣನ್ ಹಾಗೂ ಸದಸ್ಯ ಮಟ್ಟು ಅವರು ಚರ್ಚೆಯ ಬಳಿಕ ತಾಲ್ಲೂಕಿನ ಹೊನ್ನಳ್ಳಿ ಬಳಿಯ ವಿಭೂತಿಗುಡ್ಡ ಮೈನ್ಸ್ ಸೇರಿದಂತೆ ಕೆಲವು ಗಣಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಸಂಜೆ ಹೊಸಪೇಟೆಗೆ ಮರಳಿದ ಜಯಕೃಷ್ಣನ್, ಸದಸ್ಯರಾದ ಜೀವರಾಜ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಶ್ರೀನಿವಾಸ್, ಲೋಕಾಯುಕ್ತ ಪ್ರತಿನಿಧಿಗಳಾಗಿರುವ ಅರಣ್ಯ ಇಲಾಖೆಯ ದೀಪಕ್ ಶರ್ಮ ಹಾಗೂ ಕೆಲವು ಗಣಿ ಮಾಲೀಕರೊಂದಿಗೆ ಸಭೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿ ಗಣಿನಕ್ಷೆಗಳನ್ನು ಪರಿಶೀಲಿಸಿದರು.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ 99 ಗಣಿ ಕಂಪೆನಿಗಳ ಗಣಿ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಗಣಿಯ ಗಡಿಗಳನ್ನು ಗುರುತಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಹಿನ್ನೆಲೆಯಲ್ಲಿ ಈಗಾಗಲೇ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಲಾಗಿದೆ. ಪರಿಶೀಲನೆಯ ಭಾಗವಾಗಿ 4ನೇ ಬಾರಿಗೆ ಸಮಿತಿ ಜಿಲ್ಲೆಗೆ ಆಗಮಿಸಿದೆ.