ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ದ್ವಿಮುಖ ನೀತಿ: ಆಕ್ರೋಶ !

Last Updated 14 ಮೇ 2011, 7:05 IST
ಅಕ್ಷರ ಗಾತ್ರ

ಶಹಾಪುರ: ಪಟ್ಟಣದ ರಾಜ್ಯ ಹೆದ್ದಾರಿಯ ಮೇಲೆ ಒತ್ತುವರಿ ಮಾಡಿಕೊಂಡ ಅಂಗಡಿ, ಮುಂಗಟ್ಟುಗಳನ್ನು ರಸ್ತೆ ವಿಸ್ತರಣೆ ಸಮಯದಲ್ಲಿ ತೆರವುಗೊಳಿಸಿದಾಗ ಸಾರ್ವಜನಿಕರು ಸಹಕಾರ ನೀಡಿದ್ದರು. ವಿಚಿತ್ರವೆಂದರೆ  ಶಹಾಪುರ-ವಿಜಾಪುರ ಹಾಗೂ ಗುಲ್ಬರ್ಗ ರಾಜ್ಯ ಹೆದ್ದಾರಿ ಸಂಗಮವಾಗುವ ಭೀಮರಾಯನಗುಡಿಯ ಬಳಿ ಸ್ಥಾಪಿಸಲಾಗಿರುವ ದಿ.ಬಾಪೂಗೌಡ ದರ್ಶನಾಪೂರ ಪುತ್ಥಳಿಯು ರಾಜ್ಯ ಹೆದ್ದಾರಿಯ ಮೇಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದರು ಅದರ ತೆರವು ಕಾರ್ಯಚರಣೆಗೆ ಮುಂದಾಗದೆ ಜಿಲ್ಲಾಧಿಕಾರಿಯುವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ.

ಕಾನೂನು ಎಲ್ಲರಿಗೂ ಒಂದೇ ಎನ್ನುವ ಡಿಸಿಯವರು ಇಲ್ಲಿ ಮಾತ್ರ ಇಬ್ಬಗೆಯ ಕಾನೂನು ಜಾರಿಗೆಯಾಗಿದೆ. ಕಾನೂನು ರಕ್ಷಕರೆ ಮೌನವಹಿಸಿದರೆ ಹೇಗೆ ಎಂದು ತಾಲ್ಲೂಕು ಸಿಪಿಐ (ಎಂ) ಘಟಕವು ಪ್ರಶ್ನಿಸಿದೆ.
ಎರಡು ತಿಂಗಳ ಹಿಂದೆ ಪಟ್ಟಣ ರಾಜ್ಯ ಹೆದ್ದಾರಿಯ ಮೇಲೆ ಸ್ಥಾಪಿಸಲಾಗಿದ್ದ ಬಸವೇಶ್ವರ ನಾಮಫಲಕ, ಡಾ.ಬಿ.ಆರ್.ಅಂಬೇಡ್ಕರ ಕಟ್ಟೆ, ಡಾ.ಬಾಬು ಜಗಜೀವನರಾಮ್ ನಾಮಫಲಕ ವಾಲ್ಮೀಕಿ ವೃತ್ತದ  ನಾಮಫಲಕವನ್ನು ಸಾರ್ವಜನಿಕರ ಒಳಿತಿಗಾಗಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ತೆರವುಗೊಳಿಸಿದ್ದರು.

ಆಗ ತಾಳ್ಮೆಯಿಂದಲೇ ಜನತೆ ಸಹಕಾರ ನೀಡಿ ಡಿಸಿಯವರ ಪ್ರಗತಿಪರ ಕ್ರಮಕ್ಕೆ ಬೆಂಬಲ ಸೂಚಿಸಿದ್ದರು.
ಶಹಾಪುರ-ಗುಲ್ಬರ್ಗ ಹಾಗೂ ವಿಜಾಪೂರ ರಸ್ತೆ ಸಂಗಮವಾಗುವ ಭೀಮರಾಯನಗುಡಿ ಬಳಿ ಹೆದ್ದಾರಿಯ ಮೇಲೆ ಸ್ಫಾಪಿಸಲಾಗಿರುವ ದಿ.ಬಾಪೂಗೌಡ ದರ್ಶನಾಪೂರ ಅವರ ಪುತ್ಥಳಿಯನ್ನು ತೆರವುಗೊಳಿಸುವಿರಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ
 

ಕಾನೂನು ಎಂದರೆ ಎಲ್ಲರಿಗೂ ಒಂದೇ ತಾನೆ ಎಂದು ಮರು ಪ್ರಶ್ನಿಸಿ ಪುತ್ಥಳಿ ಸ್ಥಾಪನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡಿದ್ದಾರೆ ಅಥವಾ ಇಲ್ಲ ಎಂಬುವುದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಸ್ಪಷ್ಟಪಡಿಸಿದವರು ಇಂದಿಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನವಹಿಸಿದ್ದು ಸಾರ್ವಜನಿಕರಲ್ಲಿ ಗುಮಾನಿ ಶುರುವಾಗಿದೆ ಎಂದು ಸಿಪಿಐ (ಎಂ) ಅಧ್ಯಕ್ಷ ದಾವಲಸಾಬ ಹಾಗೂ ಸಿದ್ದಯ್ಯ ಹಿರೇಮಠ ಆರೋಪಿಸಿದ್ದಾರೆ.

ಬೆಟ್ಟದ ಮೇಲೆ ಅನಧಿಕೃತವಾಗಿ ಮನೆ, ಟಿನ್‌ಶೆಡ್, ಬೆಸ್‌ಮೆಂಟ್, ನಿರ್ಮಿಸಿದ 64 ಕುಟುಂಬಗಳು ಸರ್ಕಾರಿ ಗೈರಾಣ ಜಮೀನು ಒತ್ತುವರಿ ಮಾಡಿಕೊಂಡಿದ್ದು ಅದರ ತೆರವು ಕಾರ್ಯಚರಣೆ ಮುನ್ನ ರಜಾ ಕಾಲದ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ ಈಗ ಬಡ ಕುಟುಂಬಗಳು ಆತಂಕದಲ್ಲಿವೆ.

ಕೊಟ್ಯಂತರ ರೂಪಾಯಿ ಮೌಲ್ಯದ ಪುರಸಭೆಯ ಆಸ್ತಿಯನ್ನು ಚರಬಸವೇಶ್ವರ ಶಿಕ್ಷಣ ಸಂಸ್ಥೆಯು ಕಬಳಿಸಿ ಲೀಜ್ ರೂಪದಲ್ಲಿ ಬಾಡಿಗೆ ನೀಡಲಾಗಿದೆ. ಅಲ್ಲದೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದುಕೊಂಡು ವರ್ಷಗತಿಸಿದರು ಅದರ ತೆರವಿನ ಬಗ್ಗೆ ಚಿಂತನೆ ನಡೆಸಿಲ್ಲ.

ಸದ್ಯ ಸೇವೆ ಸಲ್ಲಿಸುತ್ತಿರುವ ಪುರಸಭೆಯ ಕಾನೂನು ಸಲಹೆಗಾರರನ್ನು ತೆಗೆದು ಮೊತ್ತೊಬ್ಬರನ್ನು ನೇಮಿಸಲಾಗುವುದೆಂದು ಭರವಸೆ ನೀಡಿದ್ದು ಅದು ಹುಸಿಯಾಗಿದೆ. ಅದೇ ಸರ್ಕಾರಿ ಗೈರಾಣ ಜಮೀನು ಒತ್ತುವರಿ ತೆರವಿಗೆ ತೋರಿಸಿದಷ್ಟು ಕಾಳಜಿ ಇಲ್ಲ ಯಾಕೆ ತೋರಿಸುತ್ತಿಲ್ಲವೆಂದು ತಾಲ್ಲೂಕು ಪ್ರಾಂತ ರೈತ ಸಂಘದ ಎಸ್.ಎಂ.ಸಾಗರ ಪ್ರಶ್ನಿಸಿದ್ದಾರೆ.

ದಕ್ಷ ಅಧಿಕಾರಿಯೆಂದು ನಂಬಿರುವ ಜನತೆಗೆ ಕಾನೂನು ಒಂದೇ ಎಂದು ಜಿಲ್ಲಾಧಿಕಾರಿಯವರು ಸ್ಪಷ್ಟಪಡಿಸಬೇಕು. ನಿಯಮದ ಪ್ರಕಾರ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಅವರಿಗೆ ಮನವಿ ಮಾಡಿದ್ದಾರೆ.
         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT