ಬಾಗಲಕೋಟೆ: ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಜಮಖಂಡಿ ತಾಲ್ಲೂಕಿನ ಗದ್ಯಾಳ ಗ್ರಾಮದ ವಿವಿಧ ಸಮಾಜಗಳ ಮುಖಂಡರನ್ನು ಜಿಲ್ಲಾಧಿಕಾರಿ ಮನೋಜ್ ಜೈನ್ ಸೋಮವಾರ ವಿಚಾರಣೆಗೆ ಒಳಪಡಿಸಿದರು.
ದಲಿತರಿಗೆ ಬಹಿಷ್ಕಾರ ಹಾಕಿರುವ ಸವರ್ಣೀಯರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಗುರುತರ ಆರೋಪಕ್ಕೆ ಒಳಗಾಗಿರುವ ಜಿಲ್ಲಾ ಪಂಚಾಯ್ತಿ ಸದಸ್ಯ ಅರ್ಜುನ ದಳವಾಯಿ ಮತ್ತು ವಿವಿಧ ಸಮಾಜದ ಮುಖಂಡರಾದ ಶಿವಾನಂದ ಪಾಟೀಲ, ಚಾಂದ್ಸಾಬ್ ಮುಜಾವರ, ಮಲ್ಲು ಕೋಟೆಕರ, ಅಣ್ಣಾ ದೇವರವರ, ನಿಂಗಪ್ಪ ನಿಂಬಾಳಕರ, ಪುಟ್ಟೂ ಕೋಟೆಕರ ಮತ್ತಿತರರು ವಿಚಾರಣೆಗೆ ಹಾಜರಾಗಿದ್ದರು.
ಬಹಿಷ್ಕಾರವಲ್ಲ, ಮನಸ್ತಾಪ: ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಜುನ ದಳವಾಯಿ, ‘ಗ್ರಾಮದಲ್ಲಿ ದಲಿತರು ಮತ್ತು ಇತರೆ ಸಮುದಾಯದ ಜನರ ನಡುವೆ ಮನಸ್ತಾಪ ಉಂಟಾಗಿದೆಯೇ ಹೊರತು ಸಾಮಾಜಿಕ ಬಹಿಷ್ಕಾರ ಹಾಕಿಲ್ಲ, ಹೋಟೆಲ್, ಅಂಗಡಿಗಳು ಎಲ್ಲರಿಗೂ ಮುಕ್ತವಾಗಿವೆ. ಯಾರಿಗೂ ಪ್ರವೇಶ ನಿರ್ಬಂಧಿಸಿಲ್ಲ, ಬಹಿಷ್ಕಾರ ಹಾಕಿದ್ದೇವೆ ಎಂಬುದು ಸುಳ್ಳು, ಹೊಲದ ನಡುವೆ ಎಲ್ಲೆಂದರಲ್ಲಿ ಓಡಾಡಲು ರಸ್ತೆ ಬಿಡಿ ಎಂದರೆ ಕೊಡಲು ಸಾಧ್ಯವಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಅಶಾಂತಿ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಬಹಿಷ್ಕಾರ ಆರೋಪ ಕೇಳಿಬಂದಿ ರುವುದರಿಂದ ಗದ್ಯಾಳ ಗ್ರಾಮದ ವಿವಿಧ ಸಮಾಜದ ಮುಖಂಡರನ್ನು ವಿಚಾರಣೆಗೆ ಕರೆಸಲಾಗಿತ್ತು. ನಾಳೆ ದಲಿತರನ್ನು ಕರೆದು ವಿಚಾರಣೆ ನಡೆಸಲಾಗುವುದು, ಬಳಿಕ ಎಲ್ಲ ಸಮುದಾಯವರೊಂದಿಗೆ ಒಟ್ಟಿಗೆ ಶಾಂತಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಲಾಗುವುದು’ ಎಂದರು.
‘ಬಹಿಷ್ಕಾರ ಹಾಕಿಲ್ಲ ಎಂದು ಗದ್ಯಾಳದ ವಿವಿಧ ಸಮಾಜದ ಮುಖಂಡರು ವಿಚಾರಣೆ ವೇಳೆ ತಿಳಿಸಿ ದ್ದಾರೆ. ಈಗಾಗಲೇ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಗ್ರಾಮದಲ್ಲಿ ಸಮು ದಾಯಗಳ ನಡುವೆ ಅಶಾಂತಿ ಇರುವುದು ಕಂಡು ಬರುತ್ತಿದೆ. ಬಹಿಷ್ಕಾರ ಹಾಕಿರುವ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ ಹಾಜರಿದ್ದರು. ವಿಚಾರಣೆ ವೇಳೆ ಮಾಧ್ಯಮದವರನ್ನು ಹೊರಗಿಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.