ಕೊಣನೂರು: ಮುಂದಿನ ಬಜೆಟ್ನಲ್ಲಿ ಜಿಲ್ಲೆಗೆ ವಿಶೇಷವಾಗಿ ಹೆಚ್ಚುವರಿ ಹಣ ಮೀಸಲಿಟ್ಟು ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಂಗಳವಾರ ಹೇಳಿದರು.ಹುಲಿಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ ಎನ್ನುವ ಕೊರಗು ತಮಗಿಲ್ಲ. ಅಭಿವೃದ್ಧಿ ಕೆಲಸದ ಬಗ್ಗೆ ಯಾವುದೇ ತಾರತಮ್ಯ ಇಲ್ಲದೆ ಬಜೆಟ್ನಲ್ಲಿ ಹೆಚ್ಚು ಹಣ ಮೀಸಲಿಟ್ಟು ಆದ್ಯತೆ ಮೇರೆಗೆ ಕುಡಿಯುವ ನೀರು, ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ದಿ ಸೇರಿ ದಂತೆ ಎಲ್ಲಾ ಶಾಲಾ- ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗುವುದು. ಈ ಕುರಿತು ಸರ್ಕಾರದ ಬಜೆಟ್ ಮಂಡನೆಗೆ ಮುನ್ನ ತಾವು ಜಿಲ್ಲಾಧಿಕಾ ರಿಗಳ ಸಮ್ಮುಖದಲ್ಲಿ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ತಾಲ್ಲೂಕಿನ ಹೆಬ್ಬಾಲೆ, ಗಂಜಲಗೂಡು, ಗಂಗನಾಳಿನಲ್ಲಿ ಕೆಟ್ಟು ನಿಂತಿರುವ ಐದು ಏತ ನೀರಾವರಿ ಪಂಪಸೆಟ್ ಹಾಗೂ ಹಳ್ಳಿ ಮೈಸೂರು ಹೋಬಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಶಾಸಕರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರುಗಳಿಂದ ಸಮಗ್ರ ಮಾಹಿತಿ ಪಡೆದು ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆ ಹಾಗೂ ಪಂಪಸೆಟ್ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್, ಜಿ.ಪಂ. ಸಿ.ಇ.ಓ. ಅಂಜನ ಕುಮಾರ್, ಸಕಲೇಶ ಪುರ ಉಪ ವಿಭಾಗಾಧಿಕಾರಿ ನಾಗೇಂದ್ರ ಪ್ರಸಾದ್, ತಹಶೀಲ್ದಾರ್ ಎಂ.ಕೆ. ಸವಿತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಕಸ್ತೂರಿ ರಂಗನ್, ಜಿ.ಪಂ. ಸದಸ್ಯೆ ನಾಗಮಣಿ, ತಾ.ಪಂ. ಸದಸ್ಯ ಕೀರ್ತಿರಾಜ್, ಗ್ರಾ.ಪಂ. ಅಧ್ಯಕ್ಷ ನಂಜಪ್ಪಶೆಟ್ಟಿ, ಉಪಾಧ್ಯಕ್ಷೆ ವಿಜಯಮ್ಮ ಉಪಸ್ಥಿತರಿದ್ದರು. ಬೇಲೂರೇಗೌಡ ಸ್ವಾಗತಿಸಿದರು.