ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರೈತರಿಗೆ ಸರ್ಕಾರ ನೀಡುವ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳು ಜಿಲ್ಲೆಯ ಪಾಲಾಗಿವೆ.
ಜಿಲ್ಲೆಯಲ್ಲಿ ತಲಾ ಮೂವರಿಗೆ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಲಭಿಸಿವೆ.ಕೃಷಿ ಪಂಡಿತ ಪ್ರಶಸ್ತಿ ವಿಜೇತರು: ಕೃಷಿ ಪಂಡಿತ ಪ್ರಶಸ್ತಿಗೆ ಕೃಷಿ ವಲಯಕ್ಕೆ ರೈತರು ನೀಡುವ ಕೊಡುಗೆಯನ್ನು ಪರಿಗಣಿಸಲಾಗುತ್ತದೆ. ಸಮಗ್ರ ಕೃಷಿ ಪ್ರಶಸ್ತಿ ಮತ್ತು ಬೆಳೆ ವೈವಿಧ್ಯೀಕರಣ ವಿಭಾಗದ ತೃತೀಯ ಬಹುಮಾನವನ್ನು ದಾವಣಗೆರೆ ನಗರದ ಆವರಗೆರೆಯ ಪಾರ್ವತಮ್ಮ ಮತ್ತು ಮಾಳಗೊಂಡ ಆಂಜಿನಪ್ಪ ದಂಪತಿ ಪಡೆದಿದ್ದಾರೆ.
ಇವರು 31ಗುಂಟೆ ಜಮೀನಿನಲ್ಲಿ ತರಕಾರಿ, ರಾಗಿ, ಜೋಳ, ಬೇಳೆಕಾಳು, ಭತ್ತ, ವಿವಿಧ ಹಣ್ಣಿನ ಬೆಳೆ, ಮೀನು ಸಾಕಣೆ ಮಾಡಿದ್ದಾರೆ.ಹೊನ್ನಾಳಿ ತಾಲ್ಲೂಕು ರಾಮತೀರ್ಥ ಗ್ರಾಮದ ಸುವರ್ಣಮ್ಮ ಮತ್ತು ಪ್ರಭಾಕರಗೌಡ ದಂಪತಿ ಎರೆಗೊಬ್ಬರ ಉತ್ಪಾದನೆ, ಶೇಂಗಾ, ಈರುಳ್ಳಿ, ಮೆಣಸಿನ ಗಿಡ, ದ್ವಿದಳ ಧಾನ್ಯ ಮುಂತಾದ ಬೆಳೆ ಬೆಳೆದಿದ್ದಾರೆ. ಹರಪನಹಳ್ಳಿ ತಾಲ್ಲೂಕಿನ ಬಿ.ಎಂ. ಶಿವಯೋಗಿ ಸ್ವಾಮಿ ಮತ್ತು ಸೌಮ್ಯಾ ದಂಪತಿ ಸಾವಯವ ಕೃಷಿ, ಅಂತರ್ಜಲ ಮರುಪೂರಣ, ತೋಟಗಾರಿಕೆ ಬೆಳೆಯಲ್ಲಿ ಕೃಷಿ ಬೆಳೆ ಪದ್ಧತಿ ಅನುಸರಿಸಿದ್ದಾರೆ. ಇವರಿಗೆ ತೃತೀಯ ತಲಾ ` 25ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ.
ಕೃಷಿ ಪ್ರಶಸ್ತಿ ವಿಜೇತರು: ಈ ಪ್ರಶಸ್ತಿಯನ್ನು ವಿವಿಧ ಬೆಳೆಗಳ ಉತ್ಪಾದಕತೆಯಲ್ಲಿ ಏರ್ಪಡಿಸುವ ಸ್ಪರ್ಧೆಯಲ್ಲಿನ ಸಾಧನೆ ಆಧರಿಸಿ ನೀಡಲಾಗುತ್ತದೆ.ನೀರಾವರಿ ಮುಸುಕಿನ ಜೋಳ ಬೆಳೆ ಉತ್ಪಾದನೆಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಶಿವಪ್ಪ ಮತ್ತು ಎಂ. ಪಾರ್ವತಮ್ಮ ದಂಪತಿ ಹೆಕ್ಟೇರ್ಗೆ 111.9 ಕ್ವಿಂಟಲ್ ಮೆಕ್ಕೆಜೋಳ ಬೆಳೆದು ಪ್ರಥಮ ಬಹುಮಾನ ` 30ಸಾವಿರ ಪಡೆದಿದ್ದಾರೆ.
ಇದೇ ಗ್ರಾಮದ ಮಲ್ಲಿಕಾರ್ಜುನಪ್ಪ ಹೆಕ್ಟೇರ್ಗೆ 97.40 ಕ್ವಿಂಟಲ್ ಮೆಕ್ಕೆಜೋಳ ಬೆಳೆದು ದ್ವಿತೀಯ ` 15ಸಾವಿರ ಬಹುಮಾನ ಗಳಿಸಿದ್ದಾರೆ.ಹರಪನಹಳ್ಳಿ ತಾಲ್ಲೂಕಿನ ಮಾದಾಪುರ ಸಣ್ಣ ಗೋಣೆಪ್ಪ ಮತ್ತು ಗೋಣೆಮ್ಮ ದಂಪತಿ ಹೆಕ್ಟೇರ್ಗೆ 57.63 ಕ್ವಿಂಟಲ್ ಮುಂಗಾರಿ ಜೋಳ (ಊಟದ ಜೋಳ) ಬೆಳೆದು ಪ್ರಥಮ ಪ್ರಶಸ್ತಿ ` 30 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಪ್ರಶಸ್ತಿ ಪಡೆದ ರೈತರನ್ನು ಈಚೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೌರವಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.