ಮಂಡ್ಯ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಹದವಾದ ಮಳೆ ಸುರಿದಿದ್ದು, ಕೃಷಿ ಚಟುವಟಿಕೆ ಕಾರ್ಯ ಚುರುಕುಕೊಂಡಿದೆ.
ಈಗಾಗಲೇ ಬಿತ್ತನೆ ಮಾಡಲಾಗಿದ್ದ ಉದ್ದು, ಹೆಸರು, ಅಲಸಂದೆ ಮುಂತಾದ ಧಾನ್ಯದ ಬೆಳೆಗಳಿಗೆ ಅನುಕೂಲವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉಂಟಾಗಿದ್ದ ಕುಡಿಯುವ ನೀರಿಗೂ ಕೆಲವು ಕಡೆಗಳಲ್ಲಿ ಒಂದಷ್ಟು ಪರಿಹಾರ ದೊರೆತಿದೆ.
ಜಿಲ್ಲೆಯಲ್ಲಿ ಮದ್ದೂರು ಹೊರತುಪಡಿಸಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ಒಟ್ಟು 62.9 ಮಿ.ಮೀ. ಮಳೆಯಾಗಿದೆ. ಮಂಡ್ಯದಲ್ಲಿ 18.8 ಮಿ.ಮೀ., ಪಾಂಡವಪುರ- 11.3 ಮಿ.ಮೀ., ಮಳವಳ್ಳಿ- 7 ಮಿ.ಮೀ., ನಾಗಮಂಗಲ- 13.8 ಮಿ.ಮೀ., ಕೃಷ್ಣರಾಜಪೇಟೆ- 6.8 ಮಿ.ಮೀ., ಶ್ರೀರಂಗಪಟ್ಟಣ- 5.2 ಮಿ.ಮೀ. ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ತಿಳಿಸಿದೆ. ಶನಿವಾರ ಸಂಜೆ ಮಂಡ್ಯ ನಗರದಲ್ಲಿ ತುಂತುರು ಮಳೆಯಾಗಿದೆ.