ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಇಬ್ಬರಿಗೆ ಮಾತ್ರ `ಬಹುಮತ'!

16 ಜನಪ್ರತಿನಿಧಿಗಳಿಗೆ ಶೇ. 50ಕ್ಕಿಂತ ಕಡಿಮೆ ಮತದಾರರ ಬೆಂಬಲ
Last Updated 18 ಏಪ್ರಿಲ್ 2013, 12:59 IST
ಅಕ್ಷರ ಗಾತ್ರ

ಬೆಳಗಾವಿ: `ಅರ್ಹ ಅಭ್ಯರ್ಥಿ'ಗಳಿಲ್ಲ ಎಂಬ ಕಾರಣಕ್ಕೆ ಹಲವರು ಮತದಾನ ಮಾಡದೇ ಇರುವುದರಿಂದ ಕ್ಷೇತ್ರದಲ್ಲಿ ಕೇವಲ ಶೇ. 65ರಿಂದ 70ರಷ್ಟು ಮಾತ್ರ ಮತದಾನವಾಗುತ್ತಿದೆ. ಇದರಿಂದಾಗಿ ಅಲ್ಪ ಮತದಾರರ ಬೆಂಬಲ ಪಡೆದವರೂ ಶಾಸಕರಾಗುತ್ತಿದ್ದಾರೆ.

ಚುನಾವಣೆಯ ಬಳಿಕ ರಾಜಕೀಯ ಪಕ್ಷಗಳು ಸರ್ಕಾರವನ್ನು ರಚಿಸಬೇಕಾದರೆ, ಅರ್ಧಕ್ಕಿಂತ ಹೆಚ್ಚಿನ ಸ್ಥಾನ (ಬಹುಮತ) ಪಡೆದುಕೊಳ್ಳಬೇಕು ಎಂಬ ನಿಯಮ ಇದೆ. ಆದರೆ, ಅಭ್ಯರ್ಥಿಯು ಸಮೀಪದ ಪ್ರತಿಸ್ಪರ್ಧಿಗಿಂತ 1 ಮತ ಹೆಚ್ಚು ಪಡೆದರೂ ಶಾಸಕರಾಗಬಹುದು. ಇದರಿಂದಾಗಿ ಕ್ಷೇತ್ರದ ಒಟ್ಟು ಮತದಾರರ ಪೈಕಿ ಕೇವಲ ಶೇ. 30ರಿಂದ 40ರಷ್ಟು ಮಾತ್ರ ಮತದಾರರ ಬೆಂಬಲ ಗಳಿಸಿದವರೂ `ಜನಪ್ರತಿನಿಧಿ'ಗಳಾಗುತ್ತಿದ್ದಾರೆ!

2008ರ ಚುನಾವಣೆಯನ್ನು ಗಮನಿಸಿದಾಗ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಚಿಕ್ಕೋಡಿ- ಸದಲಗಾದಲ್ಲಿ ಪ್ರಕಾಶ ಹುಕ್ಕೇರಿ (ಶೇ. 54.83) ಹಾಗೂ ಉಮೇಶ ಕತ್ತಿ (ಶೇ. 50.20) ಮಾತ್ರ `ಬಹುಮತ' ಪಡೆದುಕೊಂಡಿದ್ದಾರೆ. ಉಳಿದ 16 ಕ್ಷೇತ್ರಗಳಲ್ಲಿ ಒಟ್ಟು ಮತದಾರರಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾರರ ಬೆಂಬಲ ಪಡೆದು ಶಾಸಕರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ನಿಪ್ಪಾಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ 46,070 ಮತಗಳನ್ನು ಪಡೆದು ಆಯ್ಕೆಗೊಂಡಿದ್ದರು. ಒಟ್ಟು ಮತದಾರರಲ್ಲಿ ಶೇ. 35.73 ಮತಗಳನ್ನು ಮಾತ್ರ ಇವರು ಪಡೆದಿದ್ದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಶಿಕಲಾ ಜೊಲ್ಲೆ 38,583 ಮತಗಳನ್ನು (ಶೇ. 29.92) ಪಡೆದಿದ್ದರು.

ಚಿಕ್ಕೋಡಿ- ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ 68,575 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಒಟ್ಟು ಮತದಾರರೊಂದಿಗೆ ಹೋಲಿಸಿದರೆ, ಇವರು ಶೇ. 54.83 ಮತದಾರರ ಬೆಂಬಲವನ್ನು ಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ರಮೇಶ ಜಿಗಜಿಣಗಿಗೆ ಶೇ 35.58 (44,505 ಮತ) ಮತದಾರರ ಒಲವು ಇತ್ತು.

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಅವರು 56,847 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ಸವದಿ ಅವರಿಗೆ ಶೇ. 45.91ರಷ್ಟು ಮತದಾರರ ಬೆಂಬಲ ದೊರಕಿತ್ತು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕಿರಣಕುಮಾರ ಪಾಟೀಲರಿಗೆ ಶೇ. 21.41ರಷ್ಟು (35,179 ಮತ) ಮತದಾರರು ಸಾಥ್ ನೀಡಿದ್ದರು.

ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯ ಭರಮಗೌಡ (ರಾಜು) ಕಾಗೆ 45,286 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ಇವರಿಗೆ ಶೇ. 41.95ರಷ್ಟು ಮತದಾರರು ಬೆಂಬಲ ನೀಡಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿಗ್ವಿಜಯ ಪವಾರ ದೇಸಾಯಿ ಅವರಿಗೆ ಶೇ. 33.63ರಷ್ಟು (36,304 ಮತ) ಬೆಂಬಲ ಸಿಕ್ಕಿತ್ತು.

ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಸ್.ಬಿ. ಘಾಟಗೆ ಕೇವಲ ಶೇ. 31.69 (29,481) ಮತದಾರರ ಬೆಂಬಲದಿಂದ ಗೆಲುವು ಸಾಧಿಸಿದ್ದರು. ಸಮೀಪದ ಪ್ರತಿಸ್ಪರ್ಧಿಯಾದ ಬಿಜೆಪಿಯ ಮಹೇಂದ್ರ ತಮ್ಮಣ್ಣವರರಿಗೆ ಶೇ. 30.87ರಷ್ಟು (28,715 ಮತ) ಬೆಂಬಲ ದೊರೆತಿತ್ತು.

ರಾಯಬಾಗ ಕ್ಷೇತ್ರದಲ್ಲಿ ಬಿಜೆಪಿಯ ದುರ್ಯೋಧನ ಐಹೊಳೆ ಶೇ. 40.69 (39,378 ಮತ) ಮತದಾರರ ಬೆಂಬಲದಿಂದ ಆಯ್ಕೆಗೊಂಡಿದ್ದರೆ, ಸಮೀಪದ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ನ ಓಂಪ್ರಕಾಶ ಕಣಗಲಿಗೆ ಶೇ. 25.65 (24,818 ಮತ) ಮತದಾರರ ಬೆಂಬಲ ಲಭಿಸಿತ್ತು.

ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಉಮೇಶ ಕತ್ತಿ ಶೇ. 50.20ರಷ್ಟು (63,828 ಮತ) ಮತದಾರರ ಬೆಂಬಲದಿಂದ ಗೆದ್ದಿದ್ದರು. ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಎ.ಬಿ. ಪಾಟೀಲರಿಗೆ ಶೇ. 36.22ರಷ್ಟು (45,692 ಮತ) ಮತದಾರರ ಬೆಂಬಲ ಸೂಚಿಸಿದ್ದರು.

ಅರಭಾವಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌ನ ಬಾಲಚಂದ್ರ ಜಾರಕಿಹೊಳಿ ಅವರಿಗೆ ಶೇ. 41.81ರಷ್ಟು (53,206 ಮತ) ಮತದಾರರ ಬೆಂಬಲ ಲಭಿಸಿತ್ತು. ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ವಿವೇಕರಾವ್ ಪಾಟೀಲರಿಗೆ ಶೇ. 37.59ರಷ್ಟು (47,838 ಮತ) ಮತದಾರರು ಸಾಥ್ ನೀಡಿದ್ದರು.

ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಅವರು ಕೇವಲ ಶೇ. 36.10ರಷ್ಟು (44,989 ಮತ) ಮತದಾರರ ಬೆಂಬಲದಿಂದ ಗೆಲುವು ಸಾಧಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಅಶೋಕ ಪೂಜಾರಿಗೆ ಶೇ. 29.87ರಷ್ಟು (37,229 ಮತ) ಮತದಾರರ ಬೆಂಬಲ ದೊರೆತಿತ್ತು.

ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಶೇ. 42.47ರಷ್ಟು (46,132 ಮತ) ಮತದಾರರ ಬೆಂಬಲದಿಂದ ಗೆಲುವು ಸಾಧಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಾಳಗೌಡ ಪಾಟೀಲರಿಗೆ ಶೇ. 27.02ರಷ್ಟು (29,351 ಮತ) ಮತದಾರರು ಒಲವು ತೋರಿಸಿದ್ದರು.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಫಿರೋಜ್ ಸೇಠ್ ಅವರು ಕೇವಲ ಶೇ. 33.93ರಷ್ಟು (37,527 ಮತ) ಮತದಾರರ ಬೆಂಬಲದಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಂಕರಗೌಡ ಪಾಟೀಲರಿಗೆ ಶೇ. 30.88ರಷ್ಟು (34,154 ಮತ) ಮತದಾರರ ಬೆಂಬಲ ಸಿಕ್ಕಿತ್ತು.

ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಯ ಅಭಯ ಪಾಟೀಲರು ಶೇ. 39.96ರಷ್ಟು (45,713 ಮತ) ಮತದಾರರ ಬೆಂಬಲದೊಂದಿಗೆ ಆಯ್ಕೆಗೊಂಡಿದ್ದರು. ಎಂಇಎಸ್‌ನ ಕಿರಣ ಸಾಯನಾಕ ಶೇ. 28.61ರಷ್ಟು ಮತದಾರರ ಬೆಂಬಲದೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಸಂಜಯ ಪಾಟೀಲರು ಕೇವಲ ಶೇ. 31.73ರಷ್ಟು (42,208 ಮತ) ಮತದಾರರ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಎಸ್.ಸಿ. ಮಾಳಗಿ ಶೇ. 25.49ರಷ್ಟು ಮತದಾರರ ಬೆಂಬಲ ಲಭಿಸಿತ್ತು.
ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ ರೇಮಾನಿ ಅವರು ಕೇವಲ ಶೇ. 31.71ರಷ್ಟು (36,288 ಮತ) ಮತದಾರರ ಬೆಂಬಲದೊಂದಿಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ರಫೀಕ್ ಖಾನಾಪುರಿ ಅವರು ಶೇ. 21.52ರಷ್ಟು ಮತದಾರರ ಬೆಂಬಲದೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.

ಕಿತ್ತೂರು ಕ್ಷೇತ್ರದಲ್ಲಿ ಆಯ್ಕೆಗೊಂಡಿದ್ದ ಬಿಜೆಪಿಯ ಸುರೇಶ ಮಾರಿಹಾಳರಿಗೆ ಶೇ. 40.48ರಷ್ಟು (48,581 ಮತ) ಮತದಾರರು ಬೆಂಬಲ ಸೂಚಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಬಿ. ಇನಾಮದಾರರಿಗೆ ಶೇ. 39.58ರಷ್ಟು ಮತದಾರರ ಬೆಂಬಲ ಲಭಿಸಿತ್ತು.

ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿಯ ಜಗದೀಶ ಮೆಟಗುಡ್ಡ ಅವರು ಶೇ. 46.85ರಷ್ಟು (48,988 ಮತ) ಮತದಾರರ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ ಶೇ. 38.01ರಷ್ಟು ಮತದಾರರ ಬೆಂಬಲದೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.

ಸವದತ್ತಿ-ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವನಾಥ ಮಾಮನಿ ಅವರು ಶೇ. 44.21ರಷ್ಟು (48,255 ಮತ) ಮತದಾರರ ಬೆಂಬಲದಿಂದ ಆಯ್ಕೆಗೊಂಡಿದ್ದರು. ಕಾಂಗ್ರೆಸ್‌ನ ಸುಭಾಸ ಕೌಜಲಗಿ ಶೇ. 40.02 ಮತದಾರರ ಬೆಂಬಲದಿಂದಾಗಿ ಎರಡನೇ ಸ್ಥಾನ ಗಳಿಸಿದ್ದರು.

ರಾಮದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಶೋಕ ಪಟ್ಟಣ ಶೇ. 45.29ರಷ್ಟು (49,246 ಮತ) ಮತದಾರರ ಬೆಂಬಲದಿಂದ ಆಯ್ಕೆಗೊಂಡಿದ್ದರು. ಬಿಜೆಪಿಯ ಮಹಾದೇವಪ್ಪ ಯಾದವಾಡ ಶೇ. 44.94ರಷ್ಟು ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು.

ಚುನಾವಣೆ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯನ್ನು ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ಚುನಾವಣಾ ಆಯೋಗವು, `ಅರ್ಹ ಅಭ್ಯರ್ಥಿ'ಯನ್ನು ಆಯ್ಕೆ ಮಾಡಲು ಪ್ರತಿ ಕ್ಷೇತ್ರದಲ್ಲೂ ಶೇ. 100ರಷ್ಟು ಮತ ಚಲಾವಣೆಯಾಗಬೇಕು ಎಂಬ ಉದ್ದೇಶದಿಂದ ಈ ಬಾರಿ ರಾಜ್ಯದಾದ್ಯಂತ ಮತದಾನ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೀಗಾಗಿ ಈ ಬಾರಿ ಜಿಲ್ಲೆಯ ಕ್ಷೇತ್ರಗಳಲ್ಲಿ ಎಷ್ಟು ಪ್ರಮಾಣದ ಮತದಾನ ಆಗಲಿದೆ ಹಾಗೂ ಶಾಸಕರಾರುವವರಿಗೆ ಎಷ್ಟು ಪ್ರಮಾಣದ ಮತದಾರರ ಬೆಂಬಲ ಲಭಿಸಲಿದೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT