ಹಾವೇರಿ: ‘ಸ್ವಾಮಿ ವಿವೇಕಾನಂದರ ಶಕ್ತಿಶಾಲಿ ಸಂದೇಶಗಳನ್ನು ಯುವ ಜನತೆಗೆ ತಲುಪಿಸುವ ಉದ್ದೇಶದಿಂದ ಅವರ 150 ನೇ ಜಯಂತ್ಯುತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ‘ವಿವೇಕಾನಂದರ ರಥಯಾತ್ರೆ’ ಇದೇ 12 ರಿಂದ 17 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ’ ಎಂದು ರಾಣೆಬೆನ್ನೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಪ್ರಕಾಶಾನಂದ ಶ್ರೀಗಳು ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾರಿ ತಪ್ಪಿ ಹೋಗುತ್ತಿರುವ ಇಂದಿನ ಜನಾಂಗಕ್ಕೆ ವಿವೇಕಾನಂದರ
ಸಂದೇಶಗಳ ಅತ್ಯಗತ್ಯವಾಗಿವೆ. ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಳವಾಗಿದ್ದರೂ, ಅವರೇ ಸಮಾಜಘಾತುಕ ಶಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಿ ಅವರಲ್ಲಿ ನಿಜವಾದ ದೇಶಾಭಿಮಾನ ಮೂಡಿಸುವುದೇ ರಥಯಾತ್ರೆಯ ಉದ್ದೇಶ ಎಂದರು.
ಬೆಂಗಳೂರಿನ ರಾಮಕೃಷ್ಣಮಠ ಮತ್ತು ರಾಮಕೃಷ್ಣ ಮಿಷನ್ ಹಾಗೂ ರಾಮಕೃಷ್ಣ ಭಾವ ಪ್ರಚಾರ ಪರಿಷತ್ನ ಆಶ್ರಯದಲ್ಲಿ ರಾಮಕೃಷ್ಣರ ಜಯಂತಿ ದಿನವಾದ ಮಾ. 13 ರಂದು ಯಾತ್ರೆ ಆರಂಭವಾಗಿದೆ. ಈಗಾಗಲೇ 18 ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ರಥಯಾತ್ರೆ ಸೆ.12 ರಂದು ಜಿಲ್ಲೆಯ ಸವಣೂರು ಮೂಲಕ ಹಾವೇರಿ ಜಿಲ್ಲೆಯ ಪ್ರವೇಶ ಪಡೆಯಲಿದೆ ಎಂದರು.
ಸೆ. 12 ರಂದು ಸವಣೂರು ಹಾಗೂ ಶಿಗ್ಗಾವಿ ಪಟ್ಟಣಗಳಲ್ಲಿ ಸಂಚರಿಸಲಿರುವ ರಥಯಾತ್ರೆ, ಸೆ.13 ರಂದು ಹಾನಗಲ್ಗೆ ತೆರಳಲಿದೆ. ಈ ಮೂರು ಪಟ್ಟಣಗಳಲ್ಲಿ ಶೋಭಾಯಾತ್ರೆ ಹಾಗೂ ಸಮಾವೇಶಗಳನ್ನು ನಡೆಯಲಿದ್ದು, ಮೂರು ಕಡೆಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸೆ. 14 ರಂದು ಹಾವೇರಿ ನಗರಕ್ಕೆ ಆಗಮಿಸುವ ರಥಯಾತ್ರೆ, ಅಂದು ಬೆಳಿಗ್ಗೆಯೇ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಸ್ವಾಮಿ ತ್ಯಾಗೀಶ್ವರಾನಂದ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೇವಲ ಶಹರ ಪ್ರದೇಶಗಳಿಗೆ ಅಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ರಥಯಾತ್ರೆ ಸಂಚರಿಸಲಿದ್ದು, ಸೆ. 15 ರಂದು ಹಿರೇಕೆರೂರ ತಾಲ್ಲೂಕಿನ ಹಂಸಭಾವಿ, ಕೋಡ, ರಟ್ಟಿಹಳ್ಳಿ ಗ್ರಾಮಗಳಲ್ಲಿ ಸಂಚರಿಸುವ ರಥಯಾತ್ರೆ, ಸೆ. 16 ರಂದು ಹಿರೇಕೆರೂರ, ಬ್ಯಾಡಗಿ, ಪಟ್ಟಣಗಳಲ್ಲಿ ಶೋಭಾಯಾತ್ರೆ ಹಾಗೂ ಸಮಾವೇಶ ಮುಗಿಸಿಕೊಂಡು ರಾಣೆಬೆನ್ನೂರಗಳಿಗೆ ತೆರಳಲಿದೆ ಎಂದು ತಿಳಿಸಿದರು.
ಸೆ. 17 ರಂದು ಬೆಳಿಗ್ಗೆ ರಾಣೆಬೆನ್ನೂರ ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಯುವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ.ಪಾಟೀಲ ಭಾಗವಹಿಸಲಿದ್ದಾರೆ. ಅಂದೇ ಮಧ್ಯಾಹ್ನದ ನಂತರ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಬೀಳ್ಕೊಡಲಾಗುವುದು ಎಂದು ಸ್ವಾಮೀಜಿ ಹೇಳಿದರು.
` 30ವೆಚ್ಚದ ಲಕ್ಷ ರಥ: ವಿವೇಕಾನಂದರ ಮೂರ್ತಿ ಹೊತ್ತು ಬರುವ ರಥವನ್ನು ಸುಮಾರು `30 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿದೆ. ಬಂಗಾರ ವರ್ಣದ ರಥದಲ್ಲಿ ಎದ್ದು ನಿಂತಿರುವ ವಿವೇಕಾನಂದರ ಮೂರ್ತಿಯನ್ನು ಇಡಲಾಗಿದೆ ಎಂದು ಹೇಳಿದ ಅವರು, ಸಮಾವೇಶ ನಡೆಯುವ ಸಂದರ್ಭದಲ್ಲಿ ವಿವೇಕಾನಂದರ ಸಂದೇಶ ಹಾಗೂ ಚಿಂತನ ಮಂಥನಗಳ ಕಿರು ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೇ ಆಯಾ ತಾಲ್ಲೂಕಿನ ಶಾಸಕರಿಗೆ ರಥಯಾತ್ರೆಯ ಶೋಭಾಯಾತ್ರೆ ಹಾಗೂ ಸಮಾವೇಶದ ಜವಾಬ್ದಾರಿಯನ್ನು ನೀಡಲಾಗಿದ್ದು, ಯಾತ್ರೆಯಲ್ಲಿ ರಾಮಕೃಷ್ಣಮಠದ ಸ್ವಾಮೀಜಿ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಚಾರಿ ರಘು ಮಹಾರಾಜ, ಸಂತೋಷ ಆಲದಕಟ್ಟಿ, ಸಾಗರ ಅಂಗಡಿ, ಬಸವರಾಜ ಟಿ.ಕೆ.ಹಳ್ಳಿ ಮುಂತಾದವರು ಹಾಜರಿದ್ದರು.
ಹಾವೇರಿಯಲ್ಲಿ ಆಶ್ರಮ ಸ್ಥಾಪನೆ
ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ರಾಮಕೃಷ್ಣಮಠದ ಆಶ್ರಮ ತೆರೆಯುವ ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ಪೂರ್ವ ತಯಾರಿ ನಡೆಸಲಾಗಿದೆ ಎಂದು ಸ್ವಾಮಿ ಪ್ರಕಾಶಾನಂದ ಶ್ರೀಗಳು ತಿಳಿಸಿದರು.
ಹಿಂದಿನ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಅವರ ಇದ್ದಾಗಲೇ ಆಶ್ರಮಕ್ಕೆ ಜಾಗ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಅದಕ್ಕಾಗಿ ಪ್ರಸ್ತಾವನೆ ಕಳುಹಿಸುವುದು ವಿಳಂಬವಾಯಿತು. ಹೀಗಾಗಿ ಜಾಗ ಪಡೆಯುವ ಪ್ರಕ್ರಿಯೆ ಹಾಗೆ ಉಳಿದಿದೆ ಎಂದರು.
ಈಗಾಗಲೇ ರಾಣೆಬೆನ್ನೂರ, ಹಾವೇರಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಆಶ್ರಮದಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಯುವಜನತೆಗೆ, ಶಿಕ್ಷಕರಿಗೆ ಹಾಗೂ ಮಹಿಳೆಯರಿಗೆ ನೈತಿಕ ಮೌಲ್ಯ, ದೇಶಾಭಿಮಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಆಶ್ರಮವನ್ನು ಹೊಂದಿದರೆ, ಆಶ್ರಮದ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.