ಚಿತ್ರದುರ್ಗ: ಜಿಲ್ಲೆಯಲ್ಲಿನ ಗಣಿ ಪ್ರದೇಶದ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಜಿಲ್ಲೆಯಲ್ಲಿನ ಹೊಳಲ್ಕೆರೆ, ಹೊಸದುರ್ಗ ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿನ ಗಣಿ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯವನ್ನು ಐದು ತಂಡಗಳು ಕೈಗೊಂಡಿವೆ.
ಕಳೆದ ಎರಡು ದಿನಗಳಿಂದ ಈ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ತಂಡ ಮತ್ತು ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಈ ಕಾರ್ಯದಲ್ಲಿ ತೊಡಗಿದೆ.
ಬುಧವಾರ ಮತ್ತು ಗುರುವಾರ ಭೀಮಸಮುದ್ರ ಸುತ್ತಮುತ್ತ ಇರುವ ಸೆಸಾಗೋವಾ, ಬಿಬಿಎಚ್, ಜಾನ್, ನರಹರಿ ಮೈನ್ಸ್ಗಳ ಸಮೀಕ್ಷೆ ಕಾರ್ಯ ನಡೆಯಿತು.
ಮುಖ್ಯವಾಗಿ ಈ ತಂಡಗಳು ಗಣಿಗಾರಿಕೆ ಪ್ರದೇಶದ ಗಡಿ ಗುರುತಿಸುವ ಕಾರ್ಯ ಮಾಡಲಿವೆ. ನಂತರ ಈ ಬಗ್ಗೆ ವರದಿಯನ್ನು ಸಿಇಸಿ ತಂಡಕ್ಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.