ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಅಪಾರ ಸಂಭ್ರಮ: ವಿಜಯೋತ್ಸವ

371 ನೇ ಕಲಂ ತಿದ್ದುಪಡಿಗೆ ಲೋಕಸಭೆಯಲ್ಲಿ ಅಂಗೀಕಾರ
Last Updated 19 ಡಿಸೆಂಬರ್ 2012, 11:12 IST
ಅಕ್ಷರ ಗಾತ್ರ

ಯಾದಗಿರಿ: ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನದ 371 ನೇ ಕಲಂ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವುದಕ್ಕೆ ಜಿಲ್ಲೆಯಾದ್ಯಂತ ಹರ್ಷ ವ್ಯಕ್ತವಾಗಿದ್ದು, ಜನರು ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ಎಲ್ಲೆಡೆ ವಿಜಯೋತ್ಸವ, ಸಿಹಿ ಹಂಚುವ ಮೂಲಕ ಸಂಭ್ರಮವನ್ನು ಆಚರಿಸಿದರು.

ಕರವೇ:
ಸಂವಿಧಾನದ 371 ನೇ ಕಲಂ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಸುಭಾಷ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಸುಭಾಷ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಅರ್ಜುನ ಪವಾರ, ದೇವು ಪೂಜಾರಿ, ಹಣಮಂತ ನಾಯಕ, ಭೀಮು ಮಡ್ಡಿ, ಭೀಮು ಹತ್ತಿಕುಣಿ, ಗೋವಿಂದ ಬಸವಂತಪೂರ, ಸಿದ್ದಪ್ಪ ಕ್ಯಾಸಪನಳ್ಳಿ, ರವಿ, ಮಲ್ಲು ವರ್ಕನಳ್ಳಿ, ಮಲ್ಲೇಶಿ ಕೌಳೂರ, ಶ್ರೀನಿವಾಸ ಚಾಮನೂರ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.

ಹೈ.ಕ. ಹೋರಾಟ ಸಮಿತಿ:
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ವಿಭಾಗದ ತಾಲ್ಲೂಕು ಘಟಕದ ವತಿಯಿಂದ ನಗರದ ಸುಭಾಷ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಣ್ಣ ಜಡ್ಡಿ, ಮಲ್ಲಿಕಾರ್ಜುನ ಅರುಣಿ, ಭೀಮರಡ್ಡಿ ಕುರಕುಂದಿ, ವಿಜಯಕುಮಾರ ಪಾಟೀಲ, ಬಸವರಾಜ ಪೊಲೀಸ್‌ಪಾಟೀಲ್ ತಡಿಬಿಡಿ, ಮಲ್ಲಿನಾಥ ಸುಂಗಲಕರ್, ದೇವರಾಜ ವರ್ಕನಳ್ಳಿ, ಶ್ರೀಶೈಲ ಪೂಜಾರಿ, ಮಲ್ಲು ಬಾಡದ, ಮಹಾಂತೇಶ ಪೂಜಾರಿ, ವಿನೋದ ಶಟ್ಟಿ, ಮಂಜುನಾಥ ಹೂಗಾರ, ರಾಚಪ್ಪ ಮಲ್ಹಾರ, ಗಣೇಶ ಗುಲ್ಬರ್ಗ, ಸೋಮಸಿಂಗ್ ಚವ್ಹಾಣ, ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ಸಂತಸದ ಮಹಾಪೂರ:
ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನ ಕಲ್ಪಿಸುವ ಮಸೂದೆಗೆ ಅಂಗೀಕಾರ ಸಿಕ್ಕಿರುವುದಕ್ಕೆ ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು, ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಬಹುದಿನಗಳ ಕನಸು ನನಸಾದಂತಾಗಿದೆ. ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಮುತುವರ್ಜಿ ವಹಿಸಿರುವ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್‌ರ ಪ್ರಯತ್ನದ ಫಲವಾಗಿ ಇಂತಹ ಒಳ್ಳೆಯ ಬೆಳವಣಿಗೆ ನಡೆಯುವಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಚೆನ್ನಾರಡ್ಡಿ ಪಾಟೀಲ ತುನ್ನೂರ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಖರ್ಗೆ ಅವರ ಸತತ ಪ್ರಯತ್ನದ ಫಲವಾಗಿ ಹೈದರಾಬಾದ್ ಕರ್ನಾಟಕ ಭಾಗದ ಜನರು ಸಂತಸವನ್ನು ಅನುಭವಿಸುವಂತಾಗಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ತಿದ್ದುಪಡಿ ಮಸೂದೆ ಹೆಬ್ಬಾಗಿಲಾಗಿದೆ ಎಂದು ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ ಹತ್ತಿಕುಣಿ ಹೇಳಿದ್ದಾರೆ.

ಈ ಭಾಗದ ಜನರಿಗೆ ಮಂಗಳವಾರ ದೀಪಾವಳಿ ಸಂಭ್ರಮ ತಂದಿದೆ. ಕೇಂದ್ರ ಸರ್ಕಾರದ ಕ್ರಮದಿಂದಾಗಿ ಬಹುದಿನಗಳ ಕನಸು ಈಡೇರಿದೆ. ಈ ಭಾಗದ ಶೈಕ್ಷಣಿಕ, ಔದ್ಯೋಗಿಕ ಹಾಗೂ ವಿಶೇಷ ಅಭಿವೃದ್ಧಿಗೆ ಒತ್ತು ಸಿಕ್ಕಂತಾಗಿದೆ ಎಂದು ವಕೀಲ ಮಹಿಪಾಲರಡ್ಡಿ ಪಾಟೀಲ ದುಪ್ಪಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಹಲವಾರು ಹೋರಾಟಗಳು ನಡೆದಿವೆ. ದಶಕಗಳ ಬೇಡಿಕೆಯೊಂದು ಇದೀಗ ಈಡೇರಿದಂತಾಗಿದೆ. ಇದರಿಂದಾಗಿ ಈ ಭಾಗದ ಜನರ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವೆಂಕಟರಡ್ಡಿ ಮುದ್ನಾಳ, ಹಿರಿಯರಾದ ಅಯ್ಯಣ್ಣ ಹುಂಡೇಕಾರ ಮತ್ತಿತರರು ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ವಿಧೇಯಕಕ್ಕೆ ಒಪ್ಪಿಗೆ ನೀಡಿರುವುದು ಸಂತಸದ ಸಂಗತಿ. ಇದಕ್ಕೆ ಕಾರಣರಾದ ಕೇಂದ್ರ ಸಚಿವರು, ಬಿಜೆಪಿ ನಾಯಕರು, ಸಂಸದರು ಹಾಗೂ ಎಲ್ಲ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕಿ ನಾಗರತ್ನಾ ಕುಪ್ಪಿ ತಿಳಿಸಿದ್ದಾರೆ.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ವಿಧೇಯಕಕ್ಕೆ ಸಾಕಷ್ಟು ಮಹತ್ವ ಬಂದಿತ್ತು. ರಾಜ್ಯ ಸರ್ಕಾರದ ಅಗತ್ಯ ಸಲಹೆ-ಸೂಚನೆಯ ಜೊತೆಗೆ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡನೆ ಮಾಡಿ, ಅಂಗೀಕರಿಸಿರುವುದು ಸಂತಸದ ತಂದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪರಸ್ಪರ ಸಹಕಾರದಿಂದ ಹೈದರಾಬಾದ್ ಕರ್ನಾಟಕದ ಜನರ ಬೇಡಿಕೆ ಈಡೇರಿದೆ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಸದಸ್ಯ ಶಂಕರಗೌಡ ಪಾಟೀಲ ಶಿರವಾಳ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಮುತುವರ್ಜಿ, ಕೇಂದ್ರ ಸಚಿವ ಖರ್ಗೆ ಅವರ ಕಾಳಜಿಯ ಪರಿಣಾಮವಾಗಿ ವಿಧೇಯಕವು ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಇದು ಸಂತಸದ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ಸದಸ್ಯರಾದ ಸಿದ್ಧಣ್ಣಗೌಡ ಪೊಲೀಸ್‌ಪಾಟೀಲ, ನಾಗನಗೌಡ ಸುಬೇದಾರ, ಅನಸೂಯಾ ಬೋರಬಂಡ್ ಮುಂತಾದವರು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಭಾಗದ ಜನರ ಬಹುದಿನಗಳ ಹೋರಾಟಕ್ಕೆ ಸ್ಪಂದಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನಗರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ತಿಳಿಸಿದ್ದಾರೆ.

ಕೇಂದ್ರ ನಾಯಕರ ದಿಟ್ಟ ಕ್ರಮದಿಂದಾಗಿ ಈ ಭಾಗದ ಜನರ ಬಯಕೆ ಈಡೇರಿದೆ. ಇಲ್ಲಿನ ಜನರ ಜೀವನದಲ್ಲಿ ಸಂಭ್ರಮದ ಹೊನಲು ಹರಿಸಿದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಅವರು ಅಭಿನಂದನಾರ್ಹರು ಎಂದು ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಅನಪೂರ ಸಂತಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವುದು ಸಂತಸದ ಸಂಗತಿ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ, ಯುವ ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ, ಜೆಡಿಎಸ್ ಮುಖಂಡ ಶ್ರೀನಿವಾಸರಡ್ಡಿ ಚೆನ್ನೂರ, ನಗರ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ, ಚೆನ್ನಪ್ಪಗೌಡ ಮೋಸಂಬಿ ಮುಂತಾದವರು ಹೇಳಿದ್ದಾರೆ.

ತನಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಿದ್ಧರಾಜರಡ್ಡಿ, ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಂಗನಗೌಡ ಧನರಡ್ಡಿ, ವೀರ ಕನ್ನಡಿಗ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ನಗರಸಭೆ ಸದಸ್ಯ ಆನಂದ ಮಿಲ್ಟ್ರಿ, ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ ಸೇರಿದಂತೆ ಹಲವಾರು ಗಣ್ಯರು ಸಂತಸ                 ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT