ನವದೆಹಲಿ (ಪಿಟಿಐ): ಜಿ– 20 ಸಂಘಟನೆಯ ವಿಶ್ವಾಸಾರ್ಹತೆ ಉಳಿಯಬೇಕಾದರೆ ಆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಬೇಗನೇ ಅನುಷ್ಠಾನಗೊಳಿಸಬೇಕು ಎಂದು ಭಾರತ ಒತ್ತಾಯಿಸಿದೆ.
ಇದೇ ವೇಳೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಮೀಸಲು ಸುಧಾರಣೆ ಜಾರಿಗೊಳಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೋರುತ್ತಿರುವ ನಿರಾಸಕ್ತಿ ಬಗ್ಗೆಯೂ ಭಾರತ ಕಳವಳ ವ್ಯಕ್ತಪಡಿಸಿದೆ.
ಐಎಂಎಫ್ ಆಡಳಿತ ತತ್ವಗಳನ್ನು ಮತ್ತು ಬಂಡವಾಳ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಿಂದೇಟು ಹಾಕುತ್ತಿರುವುದು ಸ್ಪಷ್ಟ. ಈ ಧೋರಣೆಯಿಂದಾಗಿ ಜಿ–20 ಸಂಘಟನೆಯ ವಿಶ್ವಾಸಾರ್ಹತೆಗೆ ಕುಂದುಂಟಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಇಲ್ಲಿನ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಜಾಗತೀಕರಣದ ಸಂದರ್ಭದಲ್ಲಿ ಜಿ– 20 ಸಂಘಟನೆಯ ಪಾತ್ರ ಅರ್ಥಪೂಣವಾಗಬೇಕೆಂದರೆ, ಅದು ಸ್ಪಷ್ಟ ಹಾಗೂ ಖಚಿತವಾದ ಕಾರ್ಯಸೂಚಿ ಹೊಂದಿರಬೇಕು. ಸಂಘಟನೆಯು ವಿಶೇಷವಾಗಿ ಆರ್ಥಿಕ ಮತ್ತು ಹಣಕಾಸು ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನೇ ಕೇಂದ್ರೀಕರಿಸಿ ಗಣನೀಯ ಕೊಡುಗೆ ನೀಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಡಿಸೆಂಬರ್ನಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲುಟಿಒ) ಸಭೆ ನಡೆ ಯಲಿರುವ ಹಿನ್ನೆಲೆಯಲ್ಲಿ, ಡಬ್ಲುಟಿಒ ಸದಸ್ಯ ರಾಷ್ಟ್ರಗಳು ಜಿಗಟು ಧೋರಣೆ ತೊರೆಯುವಂತೆ ಸಲಹೆ ನೀಡಿದರು.