ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವಿಮೆಯ ಮಹತ್ವ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಘಟನೆಗಳು ಮತ್ತು ದಿನಗಳಿಗೆ ಸಮರ್ಪಕ ಮತ್ತು ಸೂಕ್ತ ಹಣಕಾಸು ಯೋಜನೆಗಳು ಮಾತ್ರ ಪರಿಹಾರ ಒದಗಿಸಬಲ್ಲವು. ವ್ಯಕ್ತಿಯೊಬ್ಬ ಬದುಕಿನಲ್ಲಿ ವಿವಿಧ ಹಂತಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಹಣ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
 
ಭವಿಷ್ಯದ ದಿನಗಳಲ್ಲಿ ಮದುವೆ, ಸಂಸಾರ, ಮಕ್ಕಳ ವಿದ್ಯಾಭ್ಯಾಸ, ಮನೆ - ವಾಹನ ಖರೀದಿ ಬಗ್ಗೆ ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಆಘಾತಗಳನ್ನು, ಹಣಕಾಸಿನ ಬಿಕ್ಕಟ್ಟುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಬಹುಶಃ ಬಹುತೇಕರು ನಿರ್ಲಕ್ಷಿಸಿರುತ್ತಾರೆ.

 ಒಂದು ವೇಳೆ ಕುಟುಂಬದ ದುಡಿಯುವ ಏಕೈಕ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ, ಆ ಕುಟುಂಬ ಎದುರಿಸುವ ಸಂಕಷ್ಟಗಳಿಗೆ ಅದರಲ್ಲೂ ವಿಶೇಷವಾಗಿ ಆರ್ಥಿಕ ಸಮಸ್ಯೆಗಳಿಗೆ ಕೊನೆಮೊದಲೇ  ಇರುವುದಿಲ್ಲ. ದೇಶದಲ್ಲಿ ವಿಮೆ ಸೌಲಭ್ಯವು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕೇವಲ ಶೇ 4.6ರಷ್ಟಿದೆ. ಇತರ ದೇಶಗಳಿಗೆ ಹೋಲಿಸಿದರೆ ಇದು ತುಂಬ ಕಡಿಮೆ ಪ್ರಮಾಣದಲ್ಲಿ ಇದೆ. ಸರಾಸರಿ ವಿಮೆ ಮೊತ್ತ ್ಙ 1.50 ಲಕ್ಷದಷ್ಟಿದೆ.
 
ಒಂದು ವೇಳೆ ಕುಟುಂಬಕ್ಕೆ ಇಷ್ಟು ಪ್ರಮಾಣದ ವಿಮೆ ಹಣ ಬಂದರೆ ಅದರಿಂದ ತಿಂಗಳಿಗೆ ಅಂದಾಜು ್ಙ 1000ದಷ್ಟು ಮಾತ್ರ ಬಡ್ಡಿ  ಬರುತ್ತದೆ. ಹಣದುಬ್ಬರವು ನಾಗಾಲೋಟದಲ್ಲಿ ಏರುತ್ತಲೇ ಇರುವುದರಿಂದ ಈ ಅಲ್ಪ ಮೊತ್ತವು ಕೂಡ ಕುಟುಂಬವೊಂದರ ಕನಿಷ್ಠ ಅಗತ್ಯಗಳನ್ನೂ ಈಡೇರಿಸಲು ಸಾಲುವುದಿಲ್ಲ.

ಹಣಕಾಸು ಸೌಲಭ್ಯವು ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ. ರಕ್ಷಣೆ, ಉಳಿತಾಯ, ಸಂಪತ್ತು ವೃದ್ಧಿ ಮತ್ತು ಹವ್ಯಾಸಗಳಿಗೆ ಮಾಡುವ ವೆಚ್ಚ.  ಹಣಕಾಸು ಯೋಜನೆಯೊಂದು ಹಣಕಾಸಿನ ನಷ್ಟ ನಿರ್ವಹಣೆ, ವಿಮೆ, ಸಂಪತ್ತು ಸ್ವಾಧೀನ, ಸಾಲಗಳ ನಿರ್ವಹಣೆ ಮತ್ತಿತರ ಹೊಣೆಗಾರಿಕೆಗಳನ್ನೂ ಒಳಗೊಂಡಿರುತ್ತದೆ.

 ಇವುಗಳಲ್ಲಿ ಅತಿ ಹೆಚ್ಚಿನ ಮಹತ್ವ ಇರುವುದು ಜೀವ ವಿಮೆಗೆ ಎನ್ನುವುದನ್ನು ಅನೇಕರು  ಮರೆಯುತ್ತಾರೆ. ಜೀವ ವಿಮೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಬದುಕಿನ ಬಂಡಿಯನ್ನು ಸರಾಗವಾಗಿ ಎಳೆಯಬಹುದು. ಬದುಕಿನ ವಿವಿಧ ಹಂತಗಳಲ್ಲಿನ ಅಗತ್ಯಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಬಹುದು.

ಒಂದು ವೇಳೆ ಕುಟುಂಬದ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೂ ಆತನ ಕುಟುಂಬದ ಸದಸ್ಯರು ತಮ್ಮ ಹಣಕಾಸಿನ ಅಗತ್ಯಗಳನ್ನು ಸೂಕ್ತವಾಗಿ ಈಡೇರಿಸಿಕೊಳ್ಳಬಹುದು. ವಿಮೆ ಸೌಲಭ್ಯವು ಬದುಕಿನ ಅನಿರೀಕ್ಷಿತ ಅವಘಡಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಜತೆಗೆ ಹಣದುಬ್ಬರದ ಬಿಸಿ ಹೆಚ್ಚಾಗಿ ತಟ್ಟದಂತೆಯೂ ನೋಡಿಕೊಳ್ಳುತ್ತದೆ. ವಿಮೆ ವಹಿವಾಟಿನಲ್ಲಿ ಹಣ ತೊಡಗಿಸುವುದು ಎಂದರೆ ದೀರ್ಘಾವಧಿಯ ಉಳಿತಾಯವೂ ಸಾಧ್ಯವಾಗಲಿದೆ.

ವ್ಯಕ್ತಿಯೊಬ್ಬ ಸಾಮಾನ್ಯ ರೀತಿಯಲ್ಲಿ ಬದುಕಿ ಬಾಳುವುದರ ಜತೆಗೆ ಜೀವ ವಿಮೆಯಲ್ಲಿ ಹಣ ತೊಡಗಿಸಿದರೆ ಅದರಿಂದ ಸಾಕಷ್ಟು ಉಳಿತಾಯವೂ ಆಗುತ್ತದೆ. ಒಂದು ವೇಳೆ ಆತ/ಆಕೆ ಮೃತಪಟ್ಟರೆ, ಅವರ ಪ್ರೀತಿಪಾತ್ರರ ಬದುಕು ಸಹ್ಯವಾಗಿರುತ್ತದೆ ಎನ್ನುವುದನ್ನು ಮರೆಯಬಾರದು.

ಹಣದುಬ್ಬರವು ಶೇ 7ರ ಗತಿಯಲ್ಲಿಯೇ ಮುಂದುವರೆದರೆ ಸದ್ಯದ ್ಙ 3 ಲಕ್ಷದ ಖರೀದಿ ಸಾಮರ್ಥ್ಯವು 2023ರಲ್ಲಿ ಕೇವಲ ್ಙ 70,271ರಷ್ಟಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಜೀವ ವಿಮೆಗೆ ಸಂಬಂಧಿಸಿದ ಯೋಜನೆಯಲ್ಲಿ ತೊಡಗಿಸಿದ ಹಣವು ನಿವೃತ್ತಿಯ ಬದುಕಿಗೂ ಆಸರೆಯಾಗಬಲ್ಲದು ಎನ್ನುವುದನ್ನು ಮರೆಯಬಾರದು. ಅನೇಕರು ಜೀವ ವಿಮೆ ಪಾಲಿಸಿಗಳಲ್ಲಿ ಬದುಕಿನ ಭದ್ರತೆಗಾಗಿ ಹಣ ತೊಡಗಿಸದೇ, ತೆರಿಗೆ ಲಾಭಕ್ಕಾಗಿ ಹೂಡಿಕೆ ಮಾಡುತ್ತಾರೆ. ಆದರೆ, ಅದೊಂದೇ ಕಾರಣಕ್ಕೆ ಹಣ ತೊಡಗಿಸಲು ಮುಂದಾಗಬಾರದು.

ಜೀವ ವಿಮೆಯು ದೀರ್ಘಾವಧಿಯ ಉಳಿತಾಯಕ್ಕೆ ನೆರವಾಗುವುದರ ಜತೆಗೆ ಬದುಕಿಗೆ ರಕ್ಷಣೆಯನ್ನೂ ನೀಡುತ್ತದೆ. ಬದುಕಿನ ಗುಣಮಟ್ಟ ಕಾಯ್ದಕೊಳ್ಳಲು  ಮತ್ತು ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಜೀವ ವಿಮೆ ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಜಾಣತನದ ನಿರ್ಧಾರವಾದೀತು. 
- ಅನಿಶಾ ಮೋಟ್ವಾಣಿ
(ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಇನ್ಶುರನ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT