ನಾಗಮಂಗಲ: ಜೀವ ವೈವಿಧ್ಯದ ಅಳಿವಿಗೆ ಮನುಕುಲದ ನಿರಾಸಕ್ತಿಯೇ ಕಾರಣ. ಜೀವ ವೈವಿಧ್ಯ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಆದಿಚುಂಚನಗಿರಿ ಮಠದ ವ್ಯವಸ್ಥಾಪಕ ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದರು.
ಈಚೆಗೆ ಆದಿಚುಂಚನಗಿರಿಯ ಮಯೂರ ವನದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು, ಮಂಡ್ಯ ಜಿಲ್ಲಾ ಘಟಕ, ನಾಗಮಂಗಲ ವಿಜ್ಞಾನ ವೇದಿಕೆ ಹಾಗೂ ಬಿ.ಜಿ.ಎಸ್ ಗ್ರಾಮೀಣ ಶಾಲಾ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿ ಸಲಾಗಿದ್ದ ಅಂತರಾಷ್ಟ್ರೀಯ ಜೀವ ವೈವಿಧ್ಯ ಹಾಗು ಅರಣ್ಯ ವರ್ಷಾ ಚರಣೆಯ ಮಂಡ್ಯ ಜಿಲ್ಲಾ ಮಟ್ಟದ 2 ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಆದರೆ, ಆ ಜವಾಬ್ಧಾರಿಯನ್ನು ನಿರ್ವಹಿಸುವಲ್ಲಿ ತೋರುತ್ತಿರುವ ನಿರಾಸಕ್ತಿಯ ಪರಿಣಾಮ ಜೀವ ವೈವಿಧ್ಯತೆ ವಿನಾಶದಂಚಿಗೆ ದೂಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಮಂಡ್ಯ ಘಟಕದ ಅಧ್ಯಕ್ಷ ನಾಗೇಶ್ ಅರಳಕುಪ್ಪೆ ಮಾತನಾಡಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟು ಪೋಷಿಸಿದರೆ ಅದು ಮುಂದಿನ ಪೀಳೀಗೆಗೆ ಅವರು ನೀಡುವ ವಿಶೇಷವಾದ ಕೊಡುಗೆ ಎಂದರು.
ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾದ್ಯಂತ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ವಿಜ್ಞಾನಿಗಳೊಡನೆ ಸಂವಾದ, ಪರಿಸರ ನಡಿಗೆ, ಆಕಾಶ ವೀಕ್ಷಣೆ, ಜೀವ ಪ್ರಬೇಧಗಳ ಗುರುತಿಸುವಿಕೆ, ಪರಿಸರ ಆಟ ಮುಂತಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಹೊಣೆಗಾರಿಕೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಕಾರ್ಯಾಗಾರದ ಸಂಯೋಜಕ ರಾಮಚಂದ್ರು, ಕ.ರಾ.ವಿ.ಪ ಜಿಲ್ಲಾ ಘಟಕದ ಉಪಾಧ್ಯಕ್ಷ ಕೃಷ್ಣೇಗೌಡ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.