ತುಮಕೂರು: ಪ್ರಪಂಚದ ಜೀವ ವೈವಿಧ್ಯತೆ ಅರಿಯುವ ಮುನ್ನ ಮಕ್ಕಳಿಗೆ ಸುತ್ತಲಿನ ಜೀವ ವೈವಿಧ್ಯತೆ ಬಗ್ಗೆ ಅರಿವು ನೀಡಬೇಕು ಎಂದು ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನ ಆರಾಧ್ಯ ಸಲಹೆ ನೀಡಿದರು.
ನಗರದ ಹೊರ ವಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಜ್ಞಾನ ಗುಡ್ಡದಲ್ಲಿ ನಡೆದ ಬೇಸಿಗೆ ವಿಜ್ಞಾನ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು. `ನಾವು ಇಲ್ಲದೆ ನಿಸರ್ಗ ಬದುಕಬಲ್ಲದು, ಆದರೆ ನಿಸರ್ಗ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ~ ಎಂದರು.
ನಿವೃತ್ತ ಪ್ರಾಂಶುಪಾಲ ಸಿ.ಚೌಡಪ್ಪ ಮಾತನಾಡಿ, ವಿಜ್ಞಾನ ಶಿಬಿರದಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಿದರು.
ಮಧುಗಿರಿ ವಿಜ್ಞಾನ ಕೇಂದ್ರದ ಎಂ.ಎಸ್.ಜಯರಾಂ, ಪ್ರಕೃತಿ ವಿಸ್ಮಯಗಳು, ಹೊಸ ಆವಿಷ್ಕಾರ ಅರಿಯಲು ಶಿಬಿರ ಸಹಕಾರಿ ಎಂದು ವಿವರಿಸಿದರು.
ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ಉಪಾಧ್ಯಕ್ಷ ಸಿ.ಯತಿರಾಜು, ಖಜಾಂಚಿ ಟಿ.ಜಿ.ಶಿವಲಿಂಗಯ್ಯ, ಸಂಪನ್ಮೂಲ ವ್ಯಕ್ತಿ ಎನ್.ಇಂದಿರಮ್ಮಾ, ಉಮಾದೇವಿ, ಎಂ.ಗಂಗಾಧರಪ್ಪ, ಕೆ.ನಾಗರಾಜರಾವ್ ಹಾಜರಿದ್ದರು. ಪಿ.ಪ್ರಸಾದ್ ವಂದಿಸಿದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಾದ ಯತಿನ್ಬಾಬು, ವಾಗ್ಮಿಶ್ರೀ, ಶ್ರೇಯಾ, ಸೋಹನ್ ತಾವು ಕಲಿತ ವಿಷಯಗಳನ್ನು ಹಂಚಿಕೊಂಡರು.