ಚನ್ನರಾಯಪಟ್ಟಣ: ಜೀವನ ಸುಖ-ದುಃಖಗಳ ಸಮ್ಮಿಲನ ಎಂದು ಹಾರನಹಳ್ಳಿ ಕೋಡಿ ಮಠಾಧೀಶ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಭಾನುವಾರ ಏರ್ಪಡಿಸಿದ್ದ ಅಷ್ಟೋತ್ತರ ಶತದುರ್ಗ ಸೂಕ್ತ ಹೋಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಖ, ದುಃಖ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಪರಸ್ಪರ ದ್ವೇಷ ಅಸೂಯೆ ಸಲ್ಲದು. ದುಡಿದ ಇಂತಿಷ್ಟು ಭಾಗವನ್ನು ದಾನ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.ಮನುಷ್ಯನಿಗೆ ಜಾತಿಯೆ ಮೊದಲ ಶತ್ರು. ಇದು ಪ್ರಬಲ ಅಸ್ತ್ರವಾಗಿ ಬೆಳೆಯುತ್ತಿರುವುದು ವಿಷಾದನೀಯ ಎಂದ ಅವರು, ಮನುಷ್ಯ ಒಳ್ಳೆಯದು. ಕೆಟ್ಟದ್ದನ್ನು ವಿವೇಚಿಸಿ ಸನ್ಮಾರ್ಗದಲ್ಲಿ ಸಾಗಬೇಕು ಎಂದು ನುಡಿದರು.
ಚಿತ್ರನಟ ದೊಡ್ಡಣ್ಣ ಮಾತನಾಡಿ, ಮನುಷ್ಯನಿಗೆ ದೇವರಲ್ಲಿ ಅಚಲ ನಂಬಿಕೆ ಇರಬೇಕು. ಸಿಟ್ಟು, ದುರಾಸೆಯನ್ನು ದೂರ ಮಾಡಬೇಕು ಎಂದು ತಿಳಿಸಿದರು.ಚಿಕ್ಕಮಗಳೂರು ಜಿಲ್ಲೆ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಯ್ಯನಾಯ್ಡು, ಶಾಸಕ ದಯಾನಂದ ರೆಡ್ಡಿ, ಎಂ.ಎಸ್. ನಾಗೇಂದ್ರ ಮಾತನಾಡಿದರು. ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ಮಹೇಶ್ವರಸ್ವಾಮೀಜಿ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬಿ.ಪಿ. ಮಂಜೇಗೌಡ, ಶಾಂತಿವೀರಪ್ಪಗೌಡ, ವಿ. ಕೃಷ್ಣಮೂರ್ತಿ, ಡಿ.ಎಲ್. ಮಂಜುನಾಥ್, ಮಹದೇವಪ್ಪ, ದೊಡ್ಡಮನೆ ವೆಂಕಟೇಶ್ ಉಪಸ್ಥಿತರಿದ್ದರು. ಶಿಕ್ಷಕ ಮಂಜಪ್ಪ ಸ್ವಾಗತಿಸಿದರು.