ಕೃಷ್ಣರಾಜಪೇಟೆ : ತಮ್ಮ ಜೀವನದ ಅನುಭವಗಳನ್ನು ಸರಳ ಭಾಷೆಯಲ್ಲಿ ವಚನಕಾರರು ಕಟ್ಟಿಕೊಟ್ಟಿದ್ದಾರೆ ಎಂದ ತಾಲ್ಲೂಕಿನ ದಕ್ಷಿಣ ಕಾಶಿ ಕಾಪನಹಳ್ಳಿ ಗವಿಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ತಿಳಿಸಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ತಾಲ್ಲೂಕು ಘಟಕ ಇತ್ತೀಚೆಗೆ ತಾಲ್ಲೂಕಿನ ಮಾರೇನಹಳ್ಳಿಯ ಕೆ.ಎನ್. ಜವರೇಗೌಡ ವೇದಿಕೆಯಲ್ಲಿ ಏರ್ಪಡಿಸಿದ್ದ ಕೃಷ್ಣರಾಜಪೇಟೆ ತಾಲ್ಲೂಕು ಮೊದಲ ವಚನ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮರಂತಹ ವಚನಗಳ ಮೂಲಕ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿ. ಕುಮಾರಸ್ವಾಮಿಯವರನ್ನು ತಾಲ್ಲೂಕಿನ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿದ ಅಕಾಡೆಮಿಯ ತಾಲ್ಲೂಕು ಘಟಕದ ನಿರ್ಧಾರ ಶ್ಲಾಘನೀಯ ಎಂದರು.
ಶಾಸಕ ಕೆ.ಸಿ. ನಾರಾಯಣಗೌಡ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ವಿದ್ವಾಂಸ ಶಿ. ಕುಮಾರಸ್ವಾಮಿ ಸಮಾನತೆಯ ಆಧಾರದ ಮೇಲೆ ಸಮಾಜದ ನಿರ್ಮಾಣವಾಗಬೇಕು ಎಂಬ ತತ್ವದ ಆಧಾರದ ಮೇಲೆ ರಚಿತವಾಗಿರುವ ವಚನಗಳು ನಮ್ಮ ಬದುಕಿಗೆ ಚೇತೋಹಾರಿಯಾಗಿವೆ ಎಂದರು.
ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಜಯಪ್ರಕಾಶಗೌಡ, ಸಾಹಿತಿಗಳಾದ ಹೊನ್ನಶೆಟ್ಟಿ, ಡಾ.ಟಿ. ನರಸಿಂಹರಾಜು ಗೋಷ್ಠಿಗಳಲ್ಲಿ ವಿಚಾರ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ವಿ. ಮಂಜೇಗೌಡ, ಮಾಜಿ ಅಧ್ಯಕ್ಷೆ ಜೆ. ಪ್ರೇಮಕುಮಾರಿ ರಂಗಪ್ಪ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಂ. ಸುಬ್ರಹ್ಮಣ್ಯ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್. ಚಂದ್ರಶೇಖರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ. ಶಿವರಾಮೇಗೌಡ, ವಚನ ಸಾಹಿತ್ಯ ಅಕಾಡೆಮಿ ತಾಲ್ಲೂಕು ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್ ಇತರರು ಇದ್ದರು.