ತಲಕಾವೇರಿ: ಜೀವನದಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ಮಧ್ಯರಾತ್ರಿ 11.44ಕ್ಕೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉದ್ಭವಿಸಿ, ಭಕ್ತರಿಗೆ ದರುಶನ ನೀಡಿದಳು.
ನೆರೆಹೊರೆಯ ಜಿಲ್ಲೆಗಳಿಂದಲ್ಲದೇ, ಪಕ್ಕದ ಕೇರಳ, ತಮಿಳು ನಾಡಿನಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತರು ತೀರ್ಥೋ ದ್ಭವಕ್ಕೆ ಸಾಕ್ಷಿಯಾದರು.
ವರ್ಷಕ್ಕೊಮ್ಮೆ ಮಿಥುನ ಲಗ್ನದಲ್ಲಿ ಘಟಿ ಸುವ ಈ ಅಪರೂಪದ ಪ್ರಸಂಗವನ್ನು ಕಣ್ಮನಗಳಲ್ಲಿ ತುಂಬಿ ಕೊಂಡರು. ಸುಮಾರು ಮೂರು ಗಂಟೆಗಳವರೆಗೆ ಮೈ ಕೊರೆಯುವ ಚಳಿಯಲ್ಲಿ ನಿಂತಿದ್ದ ಭಕ್ತ ಸಮೂಹಕ್ಕೆ ತೀರ್ಥೋ ದ್ಭವವನ್ನು ಕಂಡಕ್ಷಣದಲ್ಲಿಯೇ ಆಯಾಸ ಕರಗಿಹೋಯಿತು. ಭಕ್ತಿ ಪರವಶಕ್ಕೆ ಒಳಗಾದ ಭಕ್ತರು ಮುಗಿಲು ಮುಟ್ಟುವಂತೆ ಕಾವೇರಿ ಮಾತೆಗೆ ಜೈಕಾರಗಳನ್ನು ಕೂಗಿದರು.
ತೀರ್ಥೋದ್ಭವದ ತೀರ್ಥವನ್ನು ಅರ್ಚಕರು ಭಕ್ತರೆಡೆ ಪ್ರೋಕ್ಷಿಸಿದರು. ದೇವಿ ಸನ್ನಿಧಿಯ ಎದುರಿನ ಸ್ನಾನಕೊಳದ ಸುತ್ತಲೂ ಜಮಾಯಿಸಿದ್ದ ಭಕ್ತರು ಕೊಳದಲ್ಲಿ ನಾಣ್ಯ ಹಾಕಿ ಕೈಮುಗಿದು, ಕಾವೇರಿಯನ್ನು ಬೇಡಿ ಕೊಂಡರು. ಕಾವೇರಿ ತೀರ್ಥ ಪಡೆಯಲು ಬ್ರಹ್ಮಕುಂಡಿಕೆ ಬಳಿ ಭಕ್ತರು ಮುಗಿಬಿದ್ದರು. ಇವರನ್ನು ನಿಯಂತ್ರಿಸಲು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಪೊಲೀಸರು ಹರಸಾಹಸ ಪಟ್ಟರು.
ಇದಕ್ಕೂ ಮುಂಚೆ ಭಾಗಮಂಡಲದ ಭಗಂಡೇಶ್ವರ ದೇವಾ ಲಯದಿಂದ ಮಂಗಳವಾದ್ಯದೊಂದಿಗೆ ತಲಕಾವೇರಿಗೆ ತರ ಲಾದ ಚಿನ್ನಾಭರಣಗಳನ್ನು ಕಾವೇರಿ ಮಾತೆಗೆ ತೊಡಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ತಲಕಾವೇರಿ ದೇವಸ್ಥಾನದ ಆವರಣದೊಳಗೆ ದೇವಸ್ಥಾನ ಸಮಿತಿ ಅನ್ನದಾನ ಹಮ್ಮಿಕೊಂಡಿತ್ತು.
ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣಾ ಸಮಿತಿ, ವೀರಾಜಪೇಟೆ ಕೊಡವ ಸಮಾಜಹಾಗೂ ಇತರ ಸಂಸ್ಥೆಗಳು ಸಹ ಅನ್ನದಾನ ನಡೆಸಿದವು. ತೀರ್ಥೋದ್ಭವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದ್ದ ವೇಳೆ ಮಧ್ಯಾಹ್ನ ವರುಣ ಸಹ ನಾಲ್ಕಾರು ಹನಿ ಪ್ರೋಕ್ಷಿಸಿ ಹೋದ.