ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ್ಮುಖಿಯಾಗಲು ಡಾ.ಕಟ್ಟೀಮನಿ ಸಾಹಿತ್ಯ ಪ್ರಚೋದಕ

Last Updated 15 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ಬಳ್ಳಾರಿ: `ನನ್ನ ಸಾಹಿತ್ಯ ಅಮರವಾಗದಿದ್ದರೂ ಚಿಂತೆಯಿಲ್ಲ. ಬಡಜನರು, ಶೋಷಿತರು, ನೊಂದವರ ನೋವನ್ನು ನಿವಾರಿಸಲು ಪ್ರಚೋದನೆ ನೀಡಿದರೆ ಸಾಕು~ ಎಂದು ಬಯಸಿದ್ದ ಡಾ.ಬಸವರಾಜ ಕಟ್ಟೀಮನಿ ಅವರು ಅನಕೃ, ತರಾಸು ಮತ್ತಿತರಂತೆ ನಿಸ್ವಾರ್ಥ ಸಾಹಿತಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕಿ ಡಾ.ಎನ್.  ಜಯಲಕ್ಷ್ಮಿ ಅಭಿಪ್ರಾಯಪಟ್ಟರು.

ನಗರದ ಸರಳಾದೇವಿ ಸತೀಶಚಂದ್ರ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಹಾಗೂ ಬಸವರಾಜ ಕಟ್ಟೀಮನಿ ಟ್ರಸ್ಟ್‌ಗಳ ಸಹಯೋಗದಲ್ಲಿ ಏರ್ಪಡಿಸ ಲಾಗಿದ್ದ `ಬಸವರಾಜ ಕಟ್ಟೀಮನಿ ಅವರ  ಜೀವನ- ಸಾಹಿತ್ಯ- ಸಾಧನೆ~ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಏನೇ ಸಮಸ್ಯೆಗಳು ಎದುರಾದರೂ ಜೀವನವನ್ನು ಸಕಾರಾತ್ಮಕವಾಗಿ ಎದುರಿಸಬೇಕು. ಸಮಸ್ಯೆಗಳು ಕಟ್ಟಿರುವೆ ಗಳಂತೆ. ಅವುಗಳಿಗೆ ಬೆನ್ನು ತೋರಿಸಿದರೆ ನಮ್ಮನ್ನು ಹಿಂಬಾಲಿಸುತ್ತವೆ. ಅವುಗಳತ್ತ ಮುಖ ಮಾಡಿದರೆ, ನಮಗೆ ಬೆನ್ನು ತೋರಿಸಿ ಹೊರಟುಹೋಗುತ್ತವೆ. ಸಮಸ್ಯೆಗಳನ್ನು ಎದುರಿಸಿದರೇ ಸಾಧನೆ ಸಾಧ್ಯ~ ಎಂಬುದನ್ನೇ ತಮ್ಮ ಸಾಹಿತ್ಯ ರಚನೆಯ ಮೂಲಕ ಪ್ರತಿಪಾದಿಸಿದ ಕಟ್ಟೀಮನಿ ಈ ನಾಡು ಕಂಡ ಧೀಮಂತ ಬರಹಗಾರ ಎಂದು ಅವರು ಹೇಳಿದರು.

ಜೀವನದಲ್ಲಿ ಜಿಗುಪ್ಸೆ ಹೊಂದಿದ ವರು ತಮ್ಮ ಸಾಹಿತ್ಯವನ್ನು ಅಭ್ಯಸಿಸಿ, ಜೀವನದ ಮೌಲ್ಯಗಳನ್ನೂ, ಜೀವನ ಪ್ರೇಮವನ್ನೂ ರೂಢಿಸಿಕೊಳ್ಳಬೇಕು ಎಂದು ಬಯಸಿದ್ದ ಕಟ್ಟೀಮನಿ, `ಹರಿ ಜನಾಯಣ~, `ನೀ ನನ್ನ ಮುಟ್ಟಬೇಡ~, `ಜ್ವಾಲಾಮುಖಿಯ ಮೇಲೆ~, `ಗಿರಿಯ ನವಿಲು~, `ಸಮರಭೂಮಿ~, `ಪಾತರ ಗಿತ್ತಿ~, `ಜನಿವಾರ- ಶಿವದಾರ~, `ಪೌರುಷ ಪರೀಕ್ಷೆ~, `ಸಂಗೊಳ್ಳಿ ರಾಯ ನಾಯಕ~, `ನರಗುಂದ ಬಂಡಾಯ~ ಮತ್ತಿತರ ಮಹತ್ವದ ಕೃತಿಗಳನ್ನು ರಚಿಸಿದರಲ್ಲದೆ, `ಕಾದಂಬರಿಕಾರನ ಕಥೆ~ ಆತ್ಮಕೃತಿ ರಚಿಸಿದ್ದಾರೆ.

ಸಣ್ಣಕಥೆ, ಕಾದಂಬರಿ, ಪ್ರವಾಸ ಕಥನ, ಹೀಗೆ ಎಲ್ಲ ಸಾಹಿತ್ಯ ಪ್ರಕಾರದಲ್ಲೂ ಸೇವೆ ಸಲ್ಲಿಸಿದ ಅವರಿಗೆ ಬೆಳಗಾವಿಯಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಲಾಗಿತ್ತು ಎಂದು ಅವರು ಹೇಳಿದರು.

ಚಿಕಿತ್ಸಕ ಗುಣದ ಸಾಹಿತ್ಯವು ಮನುಷ್ಯನನ್ನು ಜೀವನ್ಮುಖಿ ಆಗಿಸುತ್ತದೆ. ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವವರು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಲು ಮನಸು ಮಾಡುವುದಿಲ್ಲ ಎಂಬುದನ್ನು ತಿಳಿಸಿದ ಕಟ್ಟೀಮನಿ ಅವರ ಸಾಹಿತ್ಯ ಸೇವೆ ಸದಾ ಸ್ಮರಣೀಯ ಎಂದು ಬಾದಾಮಿ ಶಿವಲಿಂಗ ತಿಳಿಸಿದರು.

ಬಸವರಾಜ ಕಟ್ಟೀಮನಿಯವರ ಸಾಧನೆ ಕುರಿತು ಡಾ.ಕೆ. ವೆಂಕಟೇಶ್ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಗಂಗಣ್ಣ ಉದ್ಘಾ ಟಿಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ, ಉಪನ್ಯಾಸಕರಾದ ಲಕ್ಷ್ಮಿ, ಕಲಾವತಿ, ದೇವಣ್ಣ ಹಾಜರಿದ್ದರು. ಡಾ. ಕೆ. ಬಸಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT