ತೆಲಸಂಗ: `ವ್ಯಕ್ತಿಯ ದೊಡ್ಡತನವನ್ನು ಗುರುತಿಸುವುದು ಆತ ತನ್ನ ಜೀವಿತದ ಅವಧಿಯಲ್ಲಿ ಮಾಡಿದ ಕಾರ್ಯಗಳಿಂದ ಹೊರತು ಆಸ್ತಿ ಅಂತಸ್ತಿನಿಂದಲ್ಲ' ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.
ಗ್ರಾಮದ ಹಿರಿಯ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ. ಬಸವಲಿಂಗ ಸ್ವಾಮೀಜಿ 7ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ನಾಡಿಮಿಡಿತವನ್ನರಿತಿದ್ದ ಬಸವಲಿಂಗ ಶ್ರಿಗಳು ಶಿಕ್ಷಣ ಸಂಸ್ಥೆಯನ್ನು ತೆರೆದು ಅನೇಕರ ಬಾಳಿಗೆ ಬೆಳಕು ನೀಡಿದ್ದಲ್ಲದೆ ತಮ್ಮ ಪ್ರವಚನದಿಂದ ಭಕ್ತರ ದಿಕ್ಕು ಬದಲಿಸಿ ಸುಮಾರ್ಗವನ್ನು ತೋರಿಸಿದ್ದರಿಂದ ಇವತ್ತಿಗೂ ಅವರ ಹೆಸರು ಎಲ್ಲರ ಮನದಲ್ಲಿ ಹಸಿರಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಹುಬ್ಬಳ್ಳಿಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಬಿ. ಹಿರೇಮಠ, ಹೊನವಾಡದ ಬಾಬುರಾವ ಮಹಾರಾಜ ಮಾತನಾಡಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಐ.ಎಲ್. ಕುಮಠಳ್ಳಿ, ವಿ.ಬಿ. ಹಿರೇಮಠ, ಹಿರಿಯ ಶಿಕ್ಷಕ ಆರ್.ಎಸ್. ಈಟಿ ಮಾತನಾಡಿದರು. ಮಲ್ಲಿಕಾರ್ಜುನ ಹತ್ತಿ, ಅಶೋಕ ಪರುಶೆಟ್ಟಿ, ವಿ.ಬಿ. ಬೇನಾರೆ ಸೇರಿದಂತೆ ಅನೇಕರು ಉಪಸ್ತಿತರಿದ್ದರು. ಎಂ. ಜಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಡಿ.ಎಂ. ಘೋರ್ಪಡೆ ಸ್ವಾಗತಿಸಿದರು. ಬಿ.ಎನ್. ಅವಟಿ ನಿರೂಪಿಸಿದರು. ಶಿಕ್ಷಕ ಹೆಳವಾರ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.