ಹೈದರಾಬಾದ್ (ಪಿಟಿಐ): ಜೀವ-ವೈವಿಧ್ಯದ ಸಂರಕ್ಷಣೆಗಾಗಿ ಮಾಡುವ ವೆಚ್ಚವನ್ನು ಭವಿಷ್ಯದ ಬಂಡವಾಳ ಹೂಡಿಕೆ ಎಂದೇ ಪರಿಗಣಿಸಬೇಕು ಎಂದು ಪರಿಸರ ಸಚಿವೆ ಜಯಂತಿ ನಟರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ಜಗತ್ತಿನಾದ್ಯಂತ ಇರುವ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯ ನಡುವೆಯೂ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ಹಿಂಜರಿಯಬಾರದು ಎಂದೂ ಅವರು ಹೇಳಿದ್ದಾರೆ.
ಜೀವ ವೈವಿಧ್ಯ ಸಮ್ಮೇಳನ (ಸಿಬಿಡಿ) ಕುರಿತ ಕಾನ್ಫರೆನ್ಸ್ ಆಫ್ ಪಾರ್ಟಿಸ್ನ 11ನೇ ಸಭೆಯ (ಸಿಒಪಿ-11) ಉದ್ಘಾಟನಾ ಸಮಾರಂಭದಲ್ಲಿ ಜಯಂತಿ ನಟರಾಜನ್ ಮಾತನಾಡಿದರು.
ಸೋಮವಾರ ಆರಂಭಗೊಂಡಿರುವ ಸಿಒಪಿ-11ಸಭೆಯು, ಜೀವ ವೈವಿಧ್ಯ ಶಿಷ್ಟಾಚಾರ ಜಾರಿಗೊಳಿಸಲು ನಿಧಿ ಸಂಗ್ರಹ ವಿಧಾನ ಮತ್ತು ಜೀವ ವೈವಿಧ್ಯ ಸಂಪನ್ಮೂಲಗಳ ಲಭ್ಯತೆ ಮತ್ತು ಅವುಗಳ ಹಂಚಿಕೆಯಿಂದ ಆಗುವ ಲಾಭ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ.
`ಈಗ ಜೀವ ವೈವಿಧ್ಯ ಸಂರಕ್ಷಿಸುವುದಕ್ಕಾಗಿ ಮಾಡುವ ವೆಚ್ಚವನ್ನು ನಮಗೆ ಮತ್ತು ನಮ್ಮ ಮುಂದಿನ ಜನಾಂಗಕ್ಕಾಗಿ ಹೂಡುವ ಬಂಡವಾಳ ಎಂದು ಪರಿಗಣಿಸಬೇಕು~ ಎಂದು ಸಚಿವರು ಹೇಳಿದ್ದಾರೆ.
ಸಿಒಪಿ-11 ಸಭೆಯಲ್ಲಿ 160 ರಾಷ್ಟ್ರಗಳು ಭಾಗವಹಿಸುವ ನಿರೀಕ್ಷೆ ಇದೆ.