ಹಾಸನ: `ರೈಲ್ವೆ ಇಲಾಖೆಯಲ್ಲಿ ದುಡಿಯುತ್ತಿರುವ ಐಪಿಎಸ್ ಅಧಿಕಾರಿ ಎಂ.ನಂಜುಂಡಸ್ವಾಮಿ ಅವರು ಎಂಟು ವರ್ಷ ಸಂಶೋಧನೆ ನಡೆಸಿ ರಚಿಸಿರುವ `ಮಾಳವ ದೊರೆಗಳು~ ಕೃತಿಯನ್ನು ಭಾನುವಾರ (ಜು.15) ಬಿಡುಗಡೆ ಮಾಡಲಾಗುವುದು~ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ಎಚ್.ಕೆ.ಸಂದೇಶ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಹೊಲೆಯರು, ಮಾದರು, ರಾಜರು ಎಂದು ಕರೆಯಿಸಿಕೊಳ್ಳುವ ಸಮುದಾಯದವರು ಕೀಳರಿಮೆ ಹೊಂದಬೇಕಾಗಿಲ್ಲ. ಹಿಂದೆ ಅವರೂ ಸಹ ರಾಜ್ಯ ಕಟ್ಟಿ ಆಳಿದಂಥ ಉದಾಹರಣೆಗಳಿವೆ. ಇಂಥ ಉದಾಹರಣೆಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ~ ಎಂದರು.
ಬೇರೆ ಬೇರೆ ಭಾಷೆ, ಪ್ರಾದೇಶಿಕ ಭಾಷೆ, ವಿವಿಧ ದೇಶಗಳಲ್ಲಿ ಹೊಲೆಯ, ಮಾದಿಗರಿಗೆ ಇರುವ ರೂಢಿ ನಾಮಗಳು, ಅವುಗಳು ಪರಸ್ಪರ ಹೋಲಿಕೆಯಾಗುವ ರೀತಿ ಮುಂತಾದವುಗಳನ್ನು ಪುಸ್ತಕದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಪುಸ್ತಕ ಬಿಡುಗಡೆಯ ದಿನ ನಂಜುಂಡಸ್ವಾಮಿ ನಗರಕ್ಕೆ ಭೇಟಿ ನೀಡಿ ಕೃತಿಯ ಬಗ್ಗೆ ಸಮಗ್ರ ಮಾಹಿತಿ ನೀಡುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ನುಡಿದರು.
ದಂಡೋರ ಎಂ.ಆರ್.ಎಚ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್. ವಿಜಯ ಕುಮಾರ್, ದಲಿತ ಸಾಹಿತ್ಯ ಪರಿಷತ್ ಹಾಸನ ಘಟಕದ ಅಧ್ಯಕ್ಷ ಹೆತ್ತೂರು ನಾಗರಾಜ್, ದಲಿತ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಆರ್.ಮರಿಜೋಸೆಫ್, ಸತೀಶ್ ಹಾಗೂ ಕ್ರಾಂತಿ ತ್ಯಾಗಿ ಪತ್ರಿಕಾಗೋಷ್ಠಿಯಲ್ಲಿದ್ದರು.