ಮುಂಬೈ (ಪಿಟಿಐ): 26/11ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಮಂಬೈ ಪೊಲೀಸರು ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಿದ್ದು, ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕ ಸಯೀದ್ ಜಬಿಉದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ದಾಳಿಯ ಪ್ರಮುಖ ಸಂಚುಕೋರ ಎಂದು ನಮೂದಿಸಲು ಸಿದ್ಧತೆಗಳು ನಡೆದಿವೆ.
ಇನ್ನು 15 ದಿನಗಳಲ್ಲಿ ಸಲ್ಲಿಸಲಾಗುವ ದೋಷಾರೋಪ ಪಟ್ಟಿಯಲ್ಲಿ ಹಿಂದಿ ಭಾಷೆಯಲ್ಲಿ ಮೊದಲ ವರ್ಷದ ಎಂ.ಎ. ಮುಗಿಸಿರುವ ಜುಂದಾಲ್ಗೆ ಪಾಕಿಸ್ತಾನದ 10 ಮಂದಿ ಭಯೋತ್ಪಾದಕರಿಗೆ ಹಿಂದಿ ಕಲಿಸುವ ಜವಾಬ್ದಾರಿ ವಹಿಸಲಾಗಿತ್ತು ಎಂಬ ವಿವರಗಳನ್ನು ಸೇರಿಸಲಾಗುತ್ತದೆ ಎಂದು ಅಪರಾಧ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಹಿಂದಿಯಲ್ಲಿ ಸಂವಹನ ನಡೆಸುವುದರಿಂದ ಪೊಲೀಸರ ಗಮನವನ್ನು ಬೇರೆಡೆ ಸೇಳೆಯುವ ಉದ್ದೇಶದಿಂದ ಭಯೋತ್ಪಾದಕರಿಗೆ ಹಿಂದಿ ಕಲಿಸಲಾಗಿತ್ತು. ಬಿಗಿ ಭದ್ರತೆಯ ಆರ್ಥರ್ ರಸ್ತೆ ಜೈಲಿನಲ್ಲಿರುವ ಅಜ್ಮಲ್ ಕಸಾಬ್ ಮತ್ತು ಜುಂದಾಲ್ ಮುಖಾಮುಖಿಯಾದಾಗ ನಡೆದ ಸಂಭಾಷಣೆಯ ವಿವರಗಳನ್ನು ಮತ್ತು ಮುಂಬೈ ದಾಳಿಯಲ್ಲಿ ಲಷ್ಕರ್- ಎ-ತೊಯ್ಬಾ ಸಂಘಟನೆಯ ಪಾತ್ರದ ಸಂಪೂರ್ಣ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.