ಮಡಿಕೇರಿ: ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸರ್ಕಾರವನ್ನು ಒತ್ತಾಯಿಸಿದ್ದು, ಈ ಸಂಬಂಧ ಜುಲೈ 1 ಮತ್ತು 2ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಿಎನ್ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ, `ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಸ್ವಾಯತ್ತ ಮಂಡಳಿಯನ್ನು ಸಂವಿಧಾನದ 6ನೇ ಶೆಡ್ಯೂಲ್ ಪ್ರಕಾರ ರಚಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಸಹಿ ಹಾಕಿರುವಂತೆ ರಾಜ್ಯದ ಬಿಜೆಪಿ ಸರ್ಕಾರ ಕೊಡವ ಲ್ಯಾಂಡ್ ಸ್ವಾಯತ್ತತೆಗೆ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.
`ಗೂರ್ಖಾಲ್ಯಾಂಡ್ ಜೊತೆಗೆ ಆಂಧ್ರ ಪ್ರದೇಶದ ತೆಲಂಗಾಣ ಪ್ರದೇಶಕ್ಕೂ ಸ್ವಾಯತ್ತತೆ ನೀಡುವ ಕುರಿತು ಕೇಂದ್ರ ಸರ್ಕಾರ ಆಲೋಚನೆ ನಡೆಸುತ್ತಿದೆ. ಇದೇ ರೀತಿಯಾಗಿ ಕೊಡವ ಲ್ಯಾಂಡ್ಗೂ ಸ್ವಾಯತ್ತತೆ ನೀಡಬೇಕು~ ಎಂದು ಆಗ್ರಹಿಸಿದರು.
`ಸ್ವಾಯತ್ತತೆಗೆ ಆಗ್ರಹಿಸಿ ಕಳೆದ ಎರಡು ದಶಕಗಳಿಂದ ಸಿಎನ್ಸಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದೆ. ಮಾನವ ಸರಪಳಿ ಹಾಗೂ ವಾಹನ ಜಾಥಾ ಇತ್ಯಾದಿಗಳ ಮೂಲಕ ಕೊಡವರ ವೇದನೆ, ಸಂವೇದನೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ~ ಎಂದರು.
`ನಮ್ಮ ಶಾಂತಿಯುತ ಹೋರಾಟವನ್ನು ದೌರ್ಬಲ್ಯವೆಂದು ಪರಿಗಣಿಸಬಾರದು~ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
`ತಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ, ಗೃಹಸಚಿವರು, ಕಾನೂನು ಸಚಿವರು ಹಾಗೂ ಲೋಕಸಭೆಯ ಸ್ಪೀಕರ್ ಮತ್ತಿತರರಿಗೆ ಮನವಿಯನ್ನು ಕಳುಹಿಸಲಾಗಿದೆ~ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಚೆಂಬಾಂಡ ಜನತ್, ಅಪ್ಪಚ್ಚೀರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.