ಹುಬ್ಬಳ್ಳಿ: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಜೂನ್ 1, 2ರಂದು ಹುಬ್ಬಳ್ಳಿ ಮತ್ತು 3ರಂದು ದಾವಣಗೆರೆಯಲ್ಲಿ ಇರಲಿದ್ದಾರೆ.
ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ನ ಕಾರ್ಯಕಾರಿಣಿ ಹುಬ್ಬಳ್ಳಿಯಲ್ಲಿ ನಡೆಯಲಿದ್ದು ಇದಕ್ಕಾಗಿ ಆಗಮಿಸುವ ರಾಹುಲ್ ಗಾಂಧಿ, ಧಾರವಾಡದ ಆರ್.ಎನ್. ಶೆಟ್ಟಿ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳ ಪರಿಶೀಲನೆಗೆ ಶುಕ್ರವಾರ ನಗರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪತ್ರಕರ್ತರಿಗೆ ತಿಳಿಸಿದರು.
ಜೂನ್ 3ರಂದು ದಾವಣಗೆರೆಗೆ ತೆರಳಲಿರುವ ರಾಹುಲ್, ಅಲ್ಲಿ ಬುದ್ಧಿಜೀವಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಜನಪ್ರತಿನಿಧಿಗಳು ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಅವರು ಹೇಳಿದರು.
`ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ನ ಕಾರ್ಯಕಾರಿಣಿ ಮೇ 31ರಿಂದ ಜೂನ್ 2ರವರೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಾಟನ್ ಕೌಂಟಿ ಕ್ಲಬ್ನಲ್ಲಿ ನಡೆಯಲಿದ್ದು ಜೂನ್ 1ರಂದು ಸಂಜೆ ಪ್ರತಿನಿಧಿಗಳೊಂದಿಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. 2ರಂದು ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ~ ಎಂದು ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾ ಘಟಕದ ಸಂಚಾಲಕ ರಜತ್ ಉಳ್ಳಾಗಡ್ಡಿಮಠ ತಿಳಿಸಿದರು. ರಾಹುಲ್ ಗಾಂಧಿ ಹುಬ್ಬಳ್ಳಿಗೆ ಇದೇ 28ರಂದು ಭೇಟಿ ನೀಡಲಿದ್ದಾರೆ ಎಂದು ಈ ಹಿಂದೆ ಯುವ ಕಾಂಗ್ರೆಸ್ನ ಮುಖಂಡರು ತಿಳಿಸಿದ್ದರು.