ಚಿಂತಾಮಣಿ: ಚಿಕ್ಕಬಳ್ಳಾಪುರ- ಕೋಲಾರ ಬ್ರಾಡ್ಗೇಜ್ ಕಾಮಗಾರಿಯು 2012 ಜೂನ್ ಅಂತ್ಯದೊಳಗೆ ಮುಕ್ತಾಯವಾಗಲಿದ್ದು ಈ ಭಾಗದ ಜನತೆಗೆ ರೈಲ್ವೆ ಸೇವೆಯು ಸಿಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಸಚಿವರು ಶನಿವಾರ ನಗರದ ಹೊರವಲಯದ ಹಳೆ ರೈಲ್ವೆ ನಿಲ್ದಾಣದ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.
ಕಾಮಗಾರಿಯು ಭರದಿಂದ ಸಾಗಿದ್ದು, ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಶೀಘ್ರ ಬಗೆಹರಿಸಿ ಕಾಮಗಾರಿ ತ್ವರಿತಗೊಳಿಸಬೇಕು. ನಿಲ್ದಾಣದಲ್ಲಿ ಟಿಕೆಟ್ಗಳನ್ನು ಕಾದಿರಿಸುವ ಕೌಂಟರ್ ಹಾಗೂ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಮಿಟಗಾನಹಳ್ಳಿ, ಸ್ವಾರಪ್ಪಲ್ಲಿ, ಹುಣಸೇನಹಳ್ಳಿ ಮತ್ತಿತರ ಕಡೆ ಅಂಡರ್ ಪಾಸ್ಗಳ ಕಾಮಗಾರಿ ಪ್ರಗತಿಯಲ್ಲಿದೆ. ಲೆವೆಲ್ ಕ್ರಾಸಿಂಗ್ ಕಾಮಗಾರಿಗಳು ನಡೆಯುತ್ತಿದ್ದು ಶೀಘ್ರ ಮುಗಿಸಲಾಗುತ್ತದೆ. ಯಲಹಂಕದಿಂದ-ಚಿಂತಾಮಣಿ, ಕೋಲಾರ-ಶ್ರೀನಿವಾಸಪುರ, ಶ್ರೀನಿವಾಸಪುರ-ಮದನಪಲ್ಲಿ ಮೂಲಕ ಆಂಧ್ರದ ಬಹುತೇಕ ಭಾಗಗಳಿಗೆ ಹಾಗೂ ಉತ್ತರ ಭಾರತದ ಕಡೆಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.
ಚಿಂತಾಮಣಿ-ಶ್ರೀನಿವಾಸಪುರ, ಕೋಲಾರ ತಾಲ್ಲೂಕುಗಳಲ್ಲಿ ಮಾವು ತರಕಾರಿ, ಹೂ ಬೆಳೆಗಳನ್ನು ಅಧಿಕವಾಗಿ ಬೆಳೆಯುತ್ತಿದ್ದು ಮಾರುಕಟ್ಟೆಗೆ ಕೊಂಡೊಯ್ಯಲು ಗೂಡ್ಸ್ ರೈಲ್ವೆ ಮೂಲಕ ಕಡಿಮೆ ವೆಚ್ಚದಲ್ಲಿ ಸಾಗಾಣಿಕೆ ಕೈಗೊಳ್ಳಬಹುದು ಎಂದರು.
ತಹಶೀಲ್ದಾರ್ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀರಾಮರೆಡ್ಡಿ, ಡಾ.ಶ್ರೀನಿವಾಸ್, ಗ್ಯಾಸ್ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚೌಡರೆಡ್ಡಿ, ಮುಖಂಡರಾದ ಮುದ್ದುಕೃಷ್ಣ ಯಾದವ್, ಪಿ.ವಿ.ವೆಂಕಟರಮಣಪ್ಪ, ರಾಮಪ್ಪ ಮತ್ತಿತರರು ಇದ್ದರು.
ಉದ್ಘಾಟನೆ: ತಾಲ್ಲೂಕಿನ ಸ್ವಾರಪ್ಪಲ್ಲಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ನಾಮಫಲಕವನ್ನು ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ಭಾಗವಹಿಸಿದ್ದ ನೂರಾರು ಮಂದಿ ಕಾಲೊನಿಗೆ ಮೂಲ ಸೌಲರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.