ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಯುವ ನಾಯಕ ಮಧುಬಂಗಾರಪ್ಪ22ರಿಂದ ರಾಜ್ಯ ಪ್ರವಾಸ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಯುವಕರನ್ನು ಜೆಡಿಎಸ್‌ನತ್ತ ಸೆಳೆಯಲು ಇದೇ 22ರಿಂದ ಎರಡು ತಿಂಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಅಲ್ಲದೆ ಏಪ್ರಿಲ್ 22ರಂದು ದಾವಣಗೆರೆಯಲ್ಲಿ ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ~ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಗುರುವಾರ ಇಲ್ಲಿ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ನಡೆದ ಯುವ ಘಟಕದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನವಶಕ್ತಿಯ ಸಂಚಲನ, ದಾವಣಗೆರೆಯಲ್ಲಿ ಮಿಲನ~ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರೊಂದಿಗೆ ಹಿಂದೆ ಗುರುತಿಸಿಕೊಂಡು ಈಗ ತಟಸ್ಥರಾಗಿರುವವರು ಹಾಗೂ ಯುವಕರನ್ನು ಜೆಡಿಎಸ್‌ಗೆ ಕರೆ ತರಲಾಗುವುದು. ರಾಜ್ಯದ ಬಿಜೆಪಿ ಮತ್ತು ಕೇಂದ್ರದ ಯುಪಿಎ ಆಡಳಿತದಿಂದ ಬೇಸತ್ತಿರುವ ಯುವಕರನ್ನು ಜೆಡಿಎಸ್‌ಗೆ ಕರೆತರುವುದು ಸುಲಭದ ಕೆಲಸ ಎಂದು ಅವರು ಹೇಳಿದರು.

`ನಮ್ಮಲ್ಲಿ ನಾಯಕತ್ವಕ್ಕೆ ಕಚ್ಚಾಟವಿಲ್ಲ. ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ಎಲ್ಲರ ಅಪೇಕ್ಷೆ. ಆ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದಂತೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ. ದಾವಣಗೆರೆ ಸಮಾವೇಶದ ನಂತರ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು~ ಎಂದರು.

ಈಗಿನ ಸಂದರ್ಭವನ್ನು ನೋಡಿದರೆ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು. ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ರಚಿಸಿ ಕೆಳಹಂತದಿಂದ ಪಕ್ಷವನ್ನು ಬಲಪಡಿಸಲಾಗುವುದು. ಮೊದಲ ಹಂತದಲ್ಲಿ ಇದೇ 22ರಂದು ಬೀದರ್‌ನಿಂದ ಪ್ರವಾಸ ಆರಂಭಿಸಿ ಮಾ.1ರಂದು ವಿಜಾಪುರದಲ್ಲಿ ಮುಕ್ತಾಯಗೊಳಿಸುತ್ತೇನೆ. 12 ಜಿಲ್ಲೆಗಳ ಪ್ರವಾಸ ಪೂರ್ಣಗೊಂಡ ನಂತರ ಎರಡನೇ ಸುತ್ತಿನ ಪ್ರವಾಸ ಆರಂಭವಾಗಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT