ಬೆಂಗಳೂರು: ‘ಜೆಡಿಎಸ್ನವರೇ ಬಂದು ಬೆಂಬಲ ಕೋರಿದ್ದಕ್ಕೆ ಬೆಂಬಲ ಕೊಟ್ಟಿದ್ದೇವೆ. ಇದು ಮೈಸೂರು ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿಕೊಂಡ ಹೊಂದಾಣಿಕೆ. ಇದಕ್ಕೂ ಪಕ್ಷದ ಹೈಕಮಾಂಡ್ಗೂ ಸಂಬಂಧ ಇಲ್ಲ’ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್- ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಈ ಕುರಿತ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
‘ಜೆಡಿಎಸ್ನವರು ಮೊದಲು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ತವಕದಲ್ಲಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರ ನಡುವಿನ ಮಾತುಕತೆ ಮುರಿದುಬಿದ್ದಿದೆ. ಈ ನಡುವೆ ನಾವೂ ಕೂಡ ಜೆಡಿಎಸ್ ಜತೆ ಹೋಗಬಾರದೆಂದು ಅಂದುಕೊಂಡಿರಲಿಲ್ಲ. ಪ್ರತಿನಿತ್ಯ ನಮ್ಮನ್ನು ಬೈಯ್ಯುವವರೇ ಬೆಂಬಲಕ್ಕೆ ನಿಂತಾಗ ಬೇಡ ಎನ್ನುವುದು ಹೇಗೆ ಎಂದು ಹೊಂದಾಣಿಕೆಗೆ ಒಪ್ಪಿಗೆ ನೀಡಲಾಗಿದೆ. ಇದು ಜಿಲ್ಲಾ ಮಟ್ಟದ ಹೊಂದಾಣಿಕೆ’ ಎಂದಷ್ಟೇ ಹೇಳಿದರು. ‘ಮೊದಲ 10 ತಿಂಗಳು ಜೆಡಿಎಸ್ನವರು ಅಧ್ಯಕ್ಷರು. ಆ ನಂತರ ಬಿಜೆಪಿಗೆ ಬಿಟ್ಟುಕೊಡಲಿದ್ದಾರೆ. ಇದರಲ್ಲಿ ವಚನ ಭ್ರಷ್ಟತೆ ಆಗುವುದಿಲ್ಲ ಎನ್ನುವ ವಿಶ್ವಾಸ ಇದೆ’ ಎಂದರು.