ಬೆಂಗಳೂರು: ಬೆಂಗಳೂರು ಪಶ್ಚಿಮ ಲಯನ್ಸ್ ಸಂಸ್ಥೆಯು ಜೆ.ಪಿ.ನಗರದಲ್ಲಿ ವಿದ್ಯಾಸಾಗರ ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಲಿದೆ.
ಆಸ್ಪತ್ರೆಯಲ್ಲಿ ಮಧುಮೇಹ ಅಂಧತ್ವ ತಪಾಸಣೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಸಂಶೋಧನೆಗೂ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಬ್ಯಾರಿ ಜೆ.ಪಾಮರ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ₨60 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಮಧುಮೇಹದಿಂದ ಅಂಧತ್ವ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನೇತ್ರ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುವಂತೆ ಆಸ್ಪತ್ರೆಯು ಕಾರ್ಯನಿರ್ವಹಿಸಲಿದೆ ಎಂದರು.
ಪಿ.ಎಸ್.ಪ್ರೇಮನಾಥ್, ‘ಲಯನ್ಸ್ ಕ್ಲಬ್ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಾದ ದೊಡ್ಡಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಐದು ಕಡೆಗಳಲ್ಲಿ ಮಧುಮೇಹಿ ಕಣ್ಣಿನ ಆಸ್ಪತ್ರೆಗಳನ್ನು ತೆರೆಯಲು ಚಿಂತನೆ ನಡೆಸಿದೆ’ ಎಂದು ಮಾಹಿತಿ ನೀಡಿದರು.