ನವದೆಹಲಿ (ಐಎಎನ್ಎಸ್): 2ಜಿ ತರಂಗಗುಚ್ಚ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಸಲ್ಲಿಸಿದ ವರದಿಯನ್ನು ಲೋಕಸಭೆ ಸೋಮವಾರ ಧ್ವನಿಮತದಿಂದ ಅಂಗೀಕರಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಈ ವರದಿಯಲ್ಲಿ ದೋಷಮುಕ್ತಗೊಳಿಸಲಾಗಿದ್ದರೆ, ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ.ವರದಿಗೆ ವಿರೋಧ ವ್ಯಕ್ತಪಡಿಸಿದ ರಾಜಾ ಅವರ ಪಕ್ಷ ಡಿಎಂಕೆ ಸಭಾತ್ಯಾಗ ಮಾಡಿತು.
ಸ್ಪೀಕರ್ ಮೀರಾ ಕುಮಾರ್ ಸದನದ ಸಮ್ಮತಿಗಾಗಿ ಪಿ.ಸಿ. ಚಾಕೊ ನೇತೃತ್ವದ ವರದಿಯನ್ನು ಮಂಡಿಸಿದ ನಂತರ ಅದನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.
ವರದಿಯ ಕುರಿತು ಚರ್ಚೆಗೆ ಕೋರಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹಾಗೂ ಸಿಪಿಎಂ ನಾಯಕ ಬಸುದೇವ ಅಚಾರ್ಯ ಅವರು ಕಳುಹಿಸಿದ್ದ ಮನವಿಗಳನ್ನು ಸ್ಪೀಕರ್ ತಿರಸ್ಕರಿಸಿದರು.
2ಜಿ ತರಂಗಗುಚ್ಚಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ₨ 1.76 ಲಕ್ಷ ಕೋಟಿ ನಷ್ಟವುಂಟಾಗಿದೆ ಎಂದು ಮಹಾಲೇಖಪಾಲರು ನೀಡಿರುವ ವರದಿಗೆ ಸಮಿತಿಯ ಬಹುತೇಕ ಸದಸ್ಯರು ಸಮ್ಮತಿ ಸೂಚಿಸಿಲ್ಲ. ಹಿಂದಿನ ಎನ್ಡಿಎ ಸರ್ಕಾರದ ಅವಧಿಯ (1998–2004) ತಪ್ಪು ದೂರಸಂಪರ್ಕ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₨ 40,000 ಕೋಟಿ ನಷ್ಟವುಂಟಾಗಿದೆ ಎಂದೂ ಸಮಿತಿ ದೂರಿದೆ.
19 ತಿಂಗಳ ವಿಚಾರಣೆಯ ನಂತರ ಚಾಕೊ ತಮ್ಮ ವರದಿಯನ್ನು ಅ.29ರಂದು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು. ಪಕ್ಷಪಾತದಿಂದ ಕೂಡಿರುವ ಈ ವರದಿಯನ್ನು ಹಿಂತಿರುಗಿಸಬೇಕು ಎಂದು ಮಾಜಿ ಸಚಿವ ಎ. ರಾಜಾ ಅವರು ಲೋಕಸಭೆ ಸ್ಪೀಕರ್ ಅವರನ್ನು ಒತ್ತಾಯಿಸಿದ್ದರು.
ಪ್ರಧಾನಿ ಹಾಗೂ ಹಣಕಾಸು ಸಚಿವರನ್ನು ತಪ್ಪಿತಸ್ಥರ ಪಟ್ಟಿಯಿಂದ ಕೈಬಿಡುವ ನಿರ್ಧಾರ ಪ್ರತಿಭಟಿಸಿ ಸಮಿತಿ-ಯಲ್ಲಿದ್ದ ಬಿಜೆಪಿ ಸದಸ್ಯರು ಈ ಸಂಬಂಧದ ಹಲವು ಸಭೆಗಳನ್ನು ಬಹಿಷ್ಕರಿಸಿದ್ದರು.ಆದರೆ ನಂತರ ಈ ಸದಸ್ಯರು ಸಮಿತಿಯ ಸಭೆಗಳಿಗೆ ಹಾಜರಾದರು.