ಬೆಂಗಳೂರು: ಅಗತ್ಯ ಮೂಲಸೌಕರ್ಯ ಒದಗಿಸಿದ ಹೊರತಾಗಿಯೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿರುವ ಜೇನುಕೃಷಿ ಅಧ್ಯಯನ ಕೇಂದ್ರ ನಿಷ್ಕ್ರಿಯವಾಗಿದೆ.
ಈ ಕೇಂದ್ರವನ್ನು 2007ರಲ್ಲಿ ಆರಂಭಿಸಲಾಯಿತು. ಜೇನುಕೃಷಿಯಲ್ಲಿ ಡಿಪ್ಲೊಮಾ ನೀಡುವುದು ಹಾಗೂ ಸಂಶೋಧನೆ ನಡೆಸುವುದು ಈ ಕೇಂದ್ರದ ಆರಂಭದ ಹಿಂದಿನ ಉದ್ದೇಶವಾಗಿತ್ತು. ಆದರೆ, ಆರಂಭವಾದ ದಿನದಿಂದಲೇ ಈ ಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಕೇಂದ್ರದ ದ್ವಾರಕ್ಕೆ ಬೀಗ ಹಾಕಲಾಗಿದೆ. ಆವರಣದಲ್ಲಿ ಜಾನುವಾರುಗಳ ಸೆಗಣಿ ರಾಶಿ ಬಿದ್ದಿದೆ. ಈ ಕೇಂದ್ರದ ಬಗ್ಗೆ ಮಾಹಿತಿ ನೀಡಲು ವಿಭಾಗದಲ್ಲಿ ಯಾರೂ ಲಭ್ಯರು ಇಲ್ಲದಂತಹ ಪರಿಸ್ಥಿತಿ ಇದೆ. `ಈ ಕೇಂದ್ರದಲ್ಲಿ ಯಾವುದೇ ಚಟುವಟಿಕೆ ಅಥವಾ ಪಾಠ ನಡೆಯುವುದನ್ನು ನಾವು ಈ ವರೆಗೆ ನೋಡಿಲ್ಲ. ದ್ವಾರಕ್ಕೆ ಬಾಗಿಲು ಹಾಕುವ ಮೂಲಕ ಈ ವಿಭಾಗ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಮೂಡುವಂತೆ ಮಾಡಲಾಗುತ್ತಿದೆ. ಆದರೆ, ವಾಸ್ತವ ಸ್ಥಿತಿ ಭಿನ್ನವಾಗಿದೆ' ಎಂದು ಸ್ಥಳೀಯರು ದೂರಿದ್ದಾರೆ.