ಕೊಳ್ಳೇಗಾಲ: ಜೇನು ದಾಳಿಯಿಂದ ಗಾಯಗೊಂಡು 20ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರಿರುವ ಘಟನೆ ತಾಲ್ಲೂಕಿನ ಎಡಕುರಿಯ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಯಡಕುರಿಯ ಗ್ರಾಮದ ರಾಜಮ್ಮ (35), ಶಿವನಂಜಮ್ಮ(40), ನಂದೀಶ (40), ಪ್ರಸಾದ್(50), ಶಿವಶಂಕರ್(40), ಮಹೇಶ್(28), ಸುಂದ್ರಮ್ಮ (30), ಪುನಿತ್(4), ಮನೋಜ್(7), ಶಿವಪ್ಪ(70), ಮನೋಜ್(13), ಮಧು(15), ಗುರುಸ್ವಾಮಿ(40), ಸ್ವಾಮಿ(38), ಮಹದೇವಮ್ಮ(40), ನಿಂಗಮ್ಮ(45), ಜ್ಯೋತಿ(25), ನಾಗಮ್ಮ(42), ಕುಶಾಲ್(25), ರತ್ನಮ್ಮ(25), ಶಾಂತಮ್ಮ(30) ಜೇನುಕಡಿತದಿಂದ ತೀವ್ರ ಅಸ್ವಸ್ತರಾಗಿ ಕೊಳ್ಳೇಗಾಲ ಸಾರ್ವಜನಿಕ ಉಪವಿಭಾಗ ಆಸ್ಪತ್ರೆ, ಖಾಸಗಿ ಜನನಿ ಮತ್ತು ಮೈಸೂರಿನ ಕೆ.ಆರ್.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ 50ಕ್ಕೂ ಹೆಚ್ಚು ಜನರು ಯಡಕುರಿಯದಿಂದ ತೆರಳಿ ಅಮಾವಾಸ್ಯೆ ಪೂಜೆ ಸಲ್ಲಿಸಿ ಸೋಮವಾರ ಗ್ರಾಮಕ್ಕೆ ಹಿಂದಿರುಗಿದ್ದರು.
ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಬರುವ ಭಕ್ತರನ್ನು ಗ್ರಾಮದಲ್ಲಿ ಉಳಿದಿರುವ ಜನರು ಪೂಜೆ ಸಲ್ಲಿಸಿ ಬರಮಾಡಿಕೊಳ್ಳುವುದು ವಾಡಿಕೆ.
ಅಂತೆಯೇ ಗ್ರಾಮದ ಮಧ್ಯೆ ಹರಿಯುವ ಕಾವೇರಿ ದಾಟಿ ಸತ್ತೇಗಾಲದ ಕಡೆಗೆ ಬಂದು ಗಂಧದಕಡ್ಡಿ ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿ ಬೋಟ್ನಲ್ಲಿ 20ಕ್ಕೂ ಹೆಚ್ಚು ಜನರು ಯಡಿಕುರಿಯಕ್ಕೆ ತೆರಳಿದರು.
ಉಳಿದವರು ಬೋಟ್ ಬಂದ ನಂತರ ತೆರಳಲು ನಿಂತಿದ್ದಾಗ ಮರದಲ್ಲಿದ್ದ ಜೇನುನೋಣಗಳು ದಾಳಿ ನಡೆದವು.
20ಕ್ಕೂ ಹೆಚ್ಚು ಜನರು ನೊಣ ಕಡಿತಕ್ಕೆ ಒಳಗಾಗಿ ಅಸ್ವಸ್ತರಾದರು.
ತಕ್ಷಣ ಇವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿ ವೈದ್ಯರಾದ ಅಜಯ್ಕುಮಾರ್, ಪುರುಷೋತ್ತಮ್ ಚಿಕಿತ್ಸೆ ನೀಡಿದ್ದಾರೆ. ಕೆಲವರು ಖಾಸಗಿ ಆಸ್ಪತ್ರೆಗೂ ಮತ್ತೆ ಕೆಲವರನ್ನು ಮೈಸೂರಿಗೆ ಕಳೂಹಿಸಲಾಗಿದೆ.