ತಿಪಟೂರು: ಮುಂಬೈ ಮೂಲದ ಗಣಿ ಉದ್ಯಮಿ ವಿನೋದ್ ಗೋಯಿಲ್ ಅವರನ್ನು ಅದಿರು ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಪೊಲೀಸರು ಬೆಂಗಳೂರಿನಲ್ಲಿ ಸೋಮವಾರ ಬಂಧಿಸಿ ಇಲ್ಲಿನ ಠಾಣೆಗೆ ಕರೆತಂದಾಗ ಛಾಯಾಚಿತ್ರ ತೆಗೆಯಲು ಮುಂದಾದ ಪತ್ರಕರ್ತರೊಬ್ಬರ ಜೇಬಿಗೆ ವ್ಯಕ್ತಿಯೊಬ್ಬರು ದುಡ್ಡು ತುರುಕಲು ಯತ್ನಿಸಿದ ಪ್ರಸಂಗ ನಡೆಯಿತು.
ಗ್ರಾಮಾಂತರ ಠಾಣೆಗೆ ಗೋಯಲ್ ಅವರನ್ನು ಕರೆತಂದಾಗ ಹೊರಗೆ ನಿಂತಿದ್ದ ಪತ್ರಕರ್ತರೊಬ್ಬರು ಫೋಟೊ ಕ್ಲಿಕ್ಕಿಸಲು ಯತ್ನಿಸಿದಾಗ ಗೋಯಲ್ ಪರ ವ್ಯಕ್ತಿಯೊಬ್ಬ ತಮ್ಮ ಧಣಿ ಮರೆಯಾಗುವಂತೆ ಅಡ್ಡ ಬರುತ್ತಲೇ ಇದ್ದರು.
ಕ್ಯಾಮೆರಾಗೆ ಅಡ್ಡ ನಿಂತು ಧಣಿಯನ್ನು ಒಳಗೆ ಕಳುಹಿಸಿದ. ಗೋಯಲ್ ಹೊರಗೆ ಬಂದಾಗ ಕ್ಯಾಮೆರಾದೊಂದಿಗೆ ಸಜ್ಜಾಗಿದ್ದ ಪತ್ರಕರ್ತರನ್ನು ಆ ವ್ಯಕ್ತಿ ಬಲವಂತದಿಂದ ಪಕ್ಕಕ್ಕೆ ಕರೆದೊಯ್ದು `ಪ್ಲೀಸ್, ಪ್ಲೀಸ್ ಸರ್ ಎಂದು ಗೋಗರೆಯುತ್ತಾ ಪೊಲೀಸರ ಎದುರೇ ಐನೂರರ ಸಾಕಷ್ಟು ನೋಟುಗಳನ್ನು ಜೇಬಿಗೆ ತುರುಕಲು ಯತ್ನಿಸಿದ.
ಇದರಿಂದ ಸಿಟ್ಟಾದ ಪತ್ರಕರ್ತರು ನೋಟುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.