ನವದೆಹಲಿ (ಪಿಟಿಐ): ಮಹಾರಾಷ್ಟ್ರದ ಜೈತಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಣು ಸ್ಥಾವರದಲ್ಲಿ ಕಠಿಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಫ್ರಾನ್ಸ್ ಗುರುವಾರ ಭಾರತಕ್ಕೆ ಭರವಸೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಫ್ರಾನ್ಸ್ ವಿದೇಶಾಂಗ ಸಚಿವ ಆಲನ್ ಯುಪೆ ಅವರು, `ಭಾರತದೊಂದಿಗೆ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದ ಸುರಕ್ಷಿತಾ ಕ್ರಮಗಳ ಬಗ್ಗೆ ನಾವು ಚರ್ಚಿಸಿದೆವು. ಅತ್ಯುನ್ನತ ಸುರಕ್ಷತಾ ಮಟ್ಟಗಳನ್ನು ಒದಗಿಸಿದಲ್ಲಿ ಅಣು ಶಕ್ತಿಯು ವಿದ್ಯುತ್ಗೆ ಪ್ರಮುಖ ಮೂಲವಾಗುತ್ತದೆ~ ಎಂದರು.
ಜೈತಾಪುರದಲ್ಲಿ 1,650 ಮೆವ್ಯಾ ಸಾಮರ್ಥ್ಯದ ಎರಡು ಸ್ಥಾವರಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು ಎಂದು ನುಡಿದರು. ಆಲನ್ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ.
ಕೂಡುಂಕುಳಂ ಪರಮಾಣು ಘಟಕದ ವಿರುದ್ಧ ತೀವ್ರ ಪ್ರತಿಭಟನೆ ಮತ್ತು ಸುರಕ್ಷತೆ ಬಗ್ಗೆ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲೇ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ.