ಬೆಂಗಳೂರು: `ದೇಶ ಎದುರಿಸುತ್ತಿರುವ ಹಿಂಸೆ ಮತ್ತು ಭಯೋತ್ಪಾದನೆಯಂತಹ ಗಂಭೀರ ಸಮಸ್ಯೆಗಳ ನಡುವೆಯೂ ಶಾಂತಿ ಮತ್ತು ಅಹಿಂಸಾ ತತ್ವವನ್ನು ಉಳಿಸಿರುವಂತೆ ಮಾಡಿರುವುದು ಜೈನ ಧರ್ಮ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಆಚಾರ್ಯ ಗುಣಧರನಂದಿ ಮಹಾರಾಜರ ಅಭಿನಂದನಾ ಸಮಿತಿಯು ನಗರದ ಜೈನ ಭವನದಲ್ಲಿ ಹಮ್ಮಿಕೊಂಡಿದ್ದ ಗುಣಧರನಂದಿ ಮಹಾರಾಜ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಜಗತ್ತಿಗೆ ಅಹಿಂಸೆ ಮತ್ತು ಸತ್ಯವನ್ನು ಸಾರಿದ ಜೈನ ಮುನಿಗಳಲ್ಲಿ ಒಬ್ಬರಾದ ಆಚಾರ್ಯ ಗುಣಧರನಂದಿ ಮಹಾರಾಜರು ರಾಜಧಾನಿಗೆ ಆಗಮಿಸಿ ಹೊಸ ವರ್ಷದಂದು ಆಶೀರ್ವದಿಸಿರುವುದು ನನ್ನಲ್ಲಿ ಹೊಸ ಬಗೆಯ ಹುರುಪುನ್ನು ತುಂಬಿದೆ. ಆಚಾರ್ಯರ ಆಶೀರ್ವಾದವು ನನಗೆ ರಾಜಕೀಯದಲ್ಲಿರುವ ಅಡೆ- ತಡೆಗಳನ್ನು ನಿವಾರಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ. 2012ರ ವರ್ಷವು ಶಾಂತಿ ಮತ್ತು ಅಹಿಂಸಾ ವರ್ಷವಾಗಿ ಪರಿಣಮಿಸಲಿದೆ~ ಎಂದರು.
`ರಾಜ್ಯದ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರಕ್ಕೆ ಸಮರ್ಪಕವಾಗಿ ತಲುಪಿಸುತ್ತಿದ್ದ ವಿ. ಧನಂಜಯ್ಕುಮಾರ್ ಅವರೇ ರಾಜ್ಯದ ಮುಖ್ಯಮಂತ್ರಿ. ರಾಜಕೀಯದ ಎಲ್ಲಾ ತೊಡರುಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತಿರುವ ಅವರು ರಾಜಕೀಯ ಗುರು~ ಎಂದು ಬಣ್ಣಿಸಿದರು.
ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿ, `ಸಂತ, ಋಷಿಗಳನ್ನು ಪೂಜಿಸುವ ನೆಲದಲ್ಲಿ ಪ್ರಕೃತಿಯ ಅನಾಹುತಗಳು ಘಟಿಸುವುದಿಲ್ಲ. ಈ ದಿಸೆಯಲ್ಲಿ 2012ರಲ್ಲಿ ಯಾವುದೇ ಪ್ರಳಯ ಸಂಭವಿಸುವುದಿಲ್ಲ. ಈ ಬಗ್ಗೆ ಸಂಶಯ ಬೇಡ~ ಎಂದರು.
`ಜೈನ ಧರ್ಮಕ್ಕೆ ಸೇರಿದವರೆಲ್ಲರೂ ಶ್ರೀಮಂತರೆಂದು ಭಾವಿಸಲಾಗುತ್ತಿದೆ. ಇದು ತಪ್ಪು ತಿಳಿವಳಿಕೆ. ವಿವಿಧ ಕ್ಷೇತ್ರಗಳಲ್ಲಿ ಜೈನರಿಗೆ ಮೀಸಲಾತಿ ಹಾಗೂ ಇತರೆ ಸೌಲಭ್ಯವನ್ನು ಪೂರೈಸುವಲ್ಲಿ ಸರ್ಕಾರ ಚಿಂತನೆ ನಡೆಸಬೇಕು~ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ವಿ.ಧನಂಜಯ್ಕುಮಾರ್ ಮಾತನಾಡಿದರು. ಕಾರ್ಯಾಧ್ಯಕ್ಷ ಎಸ್.ಜಿತೇಂದ್ರಕುಮಾರ್, ಟಿ.ಜಿ.ದೊಡ್ಡಮನಿ ಇತರರು ಉಪಸ್ಥಿತರಿದ್ದರು.