ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಧರ್ಮದಿಂದ ಅಹಿಂಸಾ ತತ್ವ ರಕ್ಷಣೆ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ದೇಶ ಎದುರಿಸುತ್ತಿರುವ ಹಿಂಸೆ ಮತ್ತು ಭಯೋತ್ಪಾದನೆಯಂತಹ ಗಂಭೀರ ಸಮಸ್ಯೆಗಳ ನಡುವೆಯೂ ಶಾಂತಿ ಮತ್ತು ಅಹಿಂಸಾ ತತ್ವವನ್ನು ಉಳಿಸಿರುವಂತೆ ಮಾಡಿರುವುದು ಜೈನ ಧರ್ಮ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಆಚಾರ್ಯ ಗುಣಧರನಂದಿ ಮಹಾರಾಜರ ಅಭಿನಂದನಾ ಸಮಿತಿಯು ನಗರದ ಜೈನ ಭವನದಲ್ಲಿ ಹಮ್ಮಿಕೊಂಡಿದ್ದ ಗುಣಧರನಂದಿ ಮಹಾರಾಜ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಜಗತ್ತಿಗೆ ಅಹಿಂಸೆ ಮತ್ತು ಸತ್ಯವನ್ನು ಸಾರಿದ ಜೈನ ಮುನಿಗಳಲ್ಲಿ ಒಬ್ಬರಾದ ಆಚಾರ್ಯ ಗುಣಧರನಂದಿ ಮಹಾರಾಜರು ರಾಜಧಾನಿಗೆ ಆಗಮಿಸಿ ಹೊಸ ವರ್ಷದಂದು ಆಶೀರ್ವದಿಸಿರುವುದು ನನ್ನಲ್ಲಿ ಹೊಸ ಬಗೆಯ ಹುರುಪುನ್ನು ತುಂಬಿದೆ. ಆಚಾರ್ಯರ ಆಶೀರ್ವಾದವು ನನಗೆ ರಾಜಕೀಯದಲ್ಲಿರುವ ಅಡೆ- ತಡೆಗಳನ್ನು ನಿವಾರಿಸಿಕೊಳ್ಳುವಂತೆ ಪ್ರೇರಣೆ ನೀಡಿದೆ. 2012ರ ವರ್ಷವು ಶಾಂತಿ ಮತ್ತು ಅಹಿಂಸಾ ವರ್ಷವಾಗಿ ಪರಿಣಮಿಸಲಿದೆ~ ಎಂದರು.

`ರಾಜ್ಯದ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರಕ್ಕೆ ಸಮರ್ಪಕವಾಗಿ ತಲುಪಿಸುತ್ತಿದ್ದ ವಿ. ಧನಂಜಯ್‌ಕುಮಾರ್ ಅವರೇ ರಾಜ್ಯದ ಮುಖ್ಯಮಂತ್ರಿ. ರಾಜಕೀಯದ ಎಲ್ಲಾ ತೊಡರುಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತಿರುವ ಅವರು ರಾಜಕೀಯ ಗುರು~ ಎಂದು ಬಣ್ಣಿಸಿದರು. 

ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿ, `ಸಂತ, ಋಷಿಗಳನ್ನು ಪೂಜಿಸುವ ನೆಲದಲ್ಲಿ ಪ್ರಕೃತಿಯ ಅನಾಹುತಗಳು ಘಟಿಸುವುದಿಲ್ಲ. ಈ ದಿಸೆಯಲ್ಲಿ 2012ರಲ್ಲಿ ಯಾವುದೇ ಪ್ರಳಯ ಸಂಭವಿಸುವುದಿಲ್ಲ. ಈ ಬಗ್ಗೆ ಸಂಶಯ ಬೇಡ~ ಎಂದರು.

`ಜೈನ ಧರ್ಮಕ್ಕೆ ಸೇರಿದವರೆಲ್ಲರೂ ಶ್ರೀಮಂತರೆಂದು ಭಾವಿಸಲಾಗುತ್ತಿದೆ. ಇದು ತಪ್ಪು ತಿಳಿವಳಿಕೆ. ವಿವಿಧ ಕ್ಷೇತ್ರಗಳಲ್ಲಿ ಜೈನರಿಗೆ ಮೀಸಲಾತಿ ಹಾಗೂ ಇತರೆ ಸೌಲಭ್ಯವನ್ನು ಪೂರೈಸುವಲ್ಲಿ ಸರ್ಕಾರ ಚಿಂತನೆ ನಡೆಸಬೇಕು~ ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ವಿ.ಧನಂಜಯ್‌ಕುಮಾರ್ ಮಾತನಾಡಿದರು. ಕಾರ್ಯಾಧ್ಯಕ್ಷ ಎಸ್.ಜಿತೇಂದ್ರಕುಮಾರ್, ಟಿ.ಜಿ.ದೊಡ್ಡಮನಿ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT