ಗುಬ್ಬಿ: `ಜೈನ ಸಾಹಿತ್ಯದಲ್ಲಿ ಉನ್ನತ ವಿಚಾರಗಳಿವೆ. ಅವುಗಳನ್ನು ಪ್ರಚುರಪಡಿಸುವ ಅಗತ್ಯವಿದೆ~ ಎಂದು ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಇಲ್ಲಿ ಭಾನುವಾರ ಹೇಳಿದರು.
ಭಗವಾನ್ ಆದಿನಾಥಸ್ವಾಮಿ, ಬಾಹುಬಲಿ ಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮರಿಗೂ ದುರಾತ್ಮರಿಗೂ ಅಂತರವಿದೆ. ಮನಸ್ಸು, ವಚನ, ಕ್ರಿಯೆಯಿಂದ ನಿತ್ಯದ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
ಸಾಹಿತಿ ಹಿ.ಚಿ.ಶಾಂತವೀರಯ್ಯ ಮಾತನಾಡಿ, ಜೈನ ಧರ್ಮದಲ್ಲಿ ಸಂಸ್ಕಾರ, ಸಂಪ್ರದಾಯ ಮರೆಯಾಗುತ್ತಿರುವುದು ವಿಷಾದಕರ ಸಂಗತಿ. ಪಂಪ ಮತ್ತು ಇತರ ಜೈನ ಕವಿಗಳ ಸಾಹಿತ್ಯ ಕೃತಿಗಳನ್ನು ಪ್ರಚುರ ಪಡಿಸಲು ಜೈನ ಧರ್ಮಿಯರು ಮುಂದಾಗಬೇಕು ಎಂದು ಸಲಹೆ ನೀಡಿದರು.
`ಆದಿನಾಥನ ಚರಿತೆ, ಶಾಂತಿನಾಥನ ಚರಿತೆ, ತೀರ್ಥಂಕರ ಪುರಾಣಗಳನ್ನು ಪೋಷಕರು ಮಕ್ಕಳಿಗೆ ಬೋಧಿಸಬೇಕು. ದೇಶದಲ್ಲಿನ ಜೈನರು ಎಂದಿಗೂ ಮೀಸಲಾತಿಗೆ ಒತ್ತಾಯಿಸಿಲ್ಲ ಎಂದರು.
ಗುಬ್ಬಿಯ ನಿಟ್ಟೂರು, ಅದಲಗೆರೆ, ಬಿದರೆ ಹಾಗೂ ಇತರೆಡೆಗಳಲ್ಲಿ ಜೈನಧರ್ಮದ ಕುರುಹುಗಳು ಇಂದಿಗೂ ಉಳಿದಿವೆ ಎಂದರು.
ತುಮಕೂರು ದಿಗಂಬರ ಜೈನಸಮಾಜದ ಮಾಜಿ ಅಧ್ಯಕ್ಷ ಜಿ.ಎಲ್.ಪದ್ಮರಾಜು, ಕಿರುತೆರೆ ಧಾರವಾಹಿ ವ್ಯವಸ್ಥಾಪಕ ನರೇಂದ್ರ ಕೆ.ರತ್ನಾವರ ಜೈನ್, ಗುಬ್ಬಿ ಬಿ.ಧರಣೇಂದ್ರಕುಮಾರ್, ಆ.ನಾ.ಚಂದ್ರಕೀರ್ತಿ, ಬಿ.ಎಲ್.ಮಾಣಿಕ್ಯರಾಜು, ಜೆ.ಡಿ.ಬ್ರಹ್ಮದೇವಕುಮಾರ್ ಇತರರಿದ್ದರು.
ಮಹಾ ಮಸ್ತಕಾಭಿಷೇಕ, ಕುಂಭಾಭಿಷೇಕ, ಚತುರ್ ಕಳಸ ಅಭಿಷೇಕ, ಎಳನೀರು, ಕಬ್ಬಿನಹಾಲು, ಕ್ಷೀರಾಭಿಷೇಕ, ಕಷಾಯ, ಗಂಧ ಅಭಿಷೇಕಗಳಿಗೆ ಭಕ್ತರು ಸಾಕ್ಷಿಯಾದರು.