ಮುದ್ದೇಬಿಹಾಳ: ಪಟ್ಟಣದ ಪಾರ್ಶ್ವ ನಾಥ ಜೈನ ಬಸದಿಯಲ್ಲಿ ಗುರುವಾರ ಜೈನ ಸಮಾಜ ಬಾಂಧವರು, ವಿಶೇಷ ವಾಗಿ ಮಹಿಳೆಯರು 16 ಭಾವಗಳ ಪರ್ವವಾದ ‘ಷೋಡಸ ಕಾರಣ’ ಕಾರ್ಯಕ್ರಮವನ್ನು ಭಕ್ತಿ, ಶ್ರದ್ಧೆಯಿಂದ ನೆರವೇರಿಸಿದರು.
ಸೆ.6ರಿಂದ ಆರಂಭವಾದ ಈ ಆಚರಣೆಯು 16 ದಿನಗಳ ಕಾಲ ನಿರಂತರವಾಗಿ ನಡೆಯುವದು. ನಿತ್ಯ ದೇವಸ್ಥಾನದಲ್ಲಿ ಪಾರ್ಶ್ವನಾಥ ಮೂರ್ತಿಗೆ ಪೂಜೆ, ಅಭಿಷೇಕ ನಡೆಸ ಲಾಯಿತು.
ಪೂಜೆಯಲ್ಲಿ ಸಕಲೀಕರಣ, ಸಂಧ್ಯಾವಂದನ, ಅರ್ಘ್ಯ ಅರ್ಪಣೆ, ಋಷಿ ಪಂಚಮಿ, ಅಧಿಕ ಸಪ್ತಮಿ, ನಿಶ್ಚಲ ಅಷ್ಟಮಿ, ಸುಗಂಧ ದಶಮಿ, ದ್ವಾದಶಿ, ಗಾರ್ಗಿ ಸಾವಿ, ಅನಂತ ಸಾವಿ ಹೀಗೆ ಅನೇಕ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆ. 14 ನೇ ದಿನ ಮುತ್ತೈದೆಯರಿಗೆ ಬಾಗೀನ ಅರ್ಪಿಸುವ ಕಾರ್ಯ ನಡೆಯಿತು.
ಉಪವಾಸ ವೃತ: ಜೈನ ಸಮಾಜದ ಪ್ರೀತಮಕುಮಾರ ರವೀಂದ್ರ ದಂಡಾವತಿ 10 ದಿನಗಳಿಂದ ದಶಲಕ್ಷಣ ಉಪವಾಸ ವೃತ ಕೈಕೊಂಡಿದ್ದು, ಕೇವಲ ನೀರು ಹಾಗೂ ಎಳೆನೀರು ಮಾತ್ರ ಸೇವಿಸಿ ವೃತ ಮಾಡುತ್ತಿರುವುದು ವಿಶೇಷ.
ನಾಳೆ ಸೆ.20, 16 ನೇ ದಿನ ಉತ್ಸವದ ಅಂತಿಮ ದಿನವಾಗಿದ್ದು, ರವೀಂದ್ರ ದಂಡಾವತಿ ಅವರ ಮನೆಯಿಂದ ಜೈನ ಬಸ್ತಿಯವರೆಗೆ ಜೈನ ಬಿಂಬವನ್ನು ಪಾಲಿಕೆಯಲ್ಲಿಟ್ಟು ಉತ್ಸವ ನಡೆಯುವದು.
ನಂತರ ಚೋವೀಸ ತೀರ್ಥಂಕರರ ವೇದಿ ಪಾರಣೆ (ವಿಸರ್ಜನೆ) ನಡೆಯುವದು.
‘ಷೋಡಸ ಕಾರಣ್’ ಉತ್ಸವದಲ್ಲಿ ಜೈನ ಸಮಾಜದ ಇಂದವ್ವ ಬೋಗಾರ, ನಾಗರತ್ನ ದಂಡಾವತಿ, ಪ್ರೀತಿ ದಂಡಾವತಿ, ದೀಪಾಲಿ, ಸುನಂದಾ ದಂಡಾವತಿ, ಸೀಮಾ ದಂಡಾವತಿ, ಶಾಂತಾ ದಂಡಾವತಿ, ಸುನಂದಾ ದಂಡಾವತಿ ಬಾಗೇವಾಡಿ, ಸುಚಿತ್ರಾ ಅಶೋಕ ಮಣಿ, ಸುನಿತಾ ದಂಡಾವತಿ, ಶೀಲಾ ದಂಡಾವತಿ, ಭಾಗ್ಯಶ್ರೀ ಶೆಟ್ಟಿ, ಪದ್ಮಾವತಿ ಬೋಗಾರ, ಸನ್ಮತಿ ದಂಡಾವತಿ, ಪ್ರೀತಮ ದಂಡಾವತಿ, ರವೀಂದ್ರ ದಂಡಾವತಿ, ಸನ್ಮತಿ ಬೋಗಾರ, ಭರತೇಶ, ಮಂಜುಳಾ ಕಾಕಂಡಕಿ ಮೊದಲಾದವರು ಪಾಲ್ಗೊಂಡಿದ್ದರು.