ಹೈದರಾಬಾದ್ (ಐಎಎನ್ಎಸ್): ಸುಮಾರು 16 ತಿಂಗಳ ಸೆರೆಮನೆ ವಾಸದ ಬಳಿಕ ಚಂಚಲಗುಡ ಕೇಂದ್ರ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾದ ವೈಎಸ್ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರಿಗೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿ, ಸಂಭ್ರಮ ಆಚರಿಸಿದರು.
ಸಂಜೆ 4ಗಂಟೆಗೆ ಜೈಲಿನಿಂದ ಹೊರಬಂದ ಜಗನ್, ಕಾರಾಗೃಹದ ಮುಂದೆ ಅವರನ್ನು ಬರಮಾಡಿಕೊಳ್ಳಲು ನೆರೆದಿದ್ದ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳತ್ತ ಕೈಮುಗಿದರು. ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಳಿಕ ಅವರು ನೇರವಾಗಿ ಜೂಬಿಲಿ ಹಿಲ್ಸ್ನಲ್ಲಿರುವ ತಮ್ಮ ‘ಲೋಟಸ್ ಪಾಂಡ್’ ಮನೆಗೆ ತೆರಳಿದರು. ದಾರಿಯುದ್ದಕ್ಕೂ ಅವರಿಗೆ ‘ಝಡ್’ ಶ್ರೇಣಿ ಭದ್ರತೆ ಒದಗಿಸಲಾಗಿತ್ತು. ಜಗನ್ ಅವರ ಭಾವಚಿತ್ರ ಮತ್ತು ಪಕ್ಷದ ಧ್ವಜ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದರು. ಅಲ್ಲದೇ ಬೈಕ್ ಮೆರವಣಿಗೆ ನಡೆಸಿದರು.
ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಜಗನ್ಗೆ ಜಾಮೀನು ಮಂಜೂರು ಮಾಡಿತ್ತು. ಮಂಗಳವಾರ ಬೆಳಿಗ್ಗೆ ಜಗನ್ ಪರ ವಕೀಲರು ಜಾಮೀನಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆ ಪೂಣರ್ಗೊಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.