ನವದೆಹಲಿ: 2 ಜಿ ಹಗರಣದಲ್ಲಿ ಸಿಲುಕಿ 194 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೊಳಿ ಮಂಗಳವಾರ ಜಾಮೀನಿನ ಮೇಲೆ ಹೊರಬಂದರು.
ನ್ಯಾಯಾಲಯ ಸೋಮವಾರವೇ ಜಾಮೀನು ಬಿಡುಗಡೆಗೆ ಆದೇಶಿಸಿತ್ತು. ಆದರೆ ಈ ಸಂಬಂಧ ಬಾಂಡ್ಗಳನ್ನು ಸಲ್ಲಿಸಲು ಕೆಲವು ವಿಧಿಗಳನ್ನು ಪೂರೈಸಬೇಕಿದ್ದುದರಿಂದ ಬಿಡುಗಡೆಗಾಗಿ ಮಂಗಳವಾರ ಸಂಜೆವರೆಗೂ ಅವರು ಕಾಯಬೇಕಾಯಿತು.
ಇತರ ಆರೋಪಿಗಳಾದ ಶರದ್ ಕುಮಾರ್, ಶಾಹಿದ್ ಉಸ್ಮಾನ್ ಬಲ್ವಾ, ಕರೀಂ ಮೊರಾನಿ, ರಾಜೀವ್ ಅಗರ್ವಾಲ್ ಮತ್ತು ಆಸಿಫ್ ಬಲ್ವ ಅವರೂ ಇದೇ ವೇಳೆ ಬಿಡುಗಡೆಗೊಂಡರು.
ಸಂಜೆ 7.30ಕ್ಕೆ ಬಿಡುಗಡೆಯಾದ ಅವರ ಮುಖದಲ್ಲಿ ಸಂತಸ ಕಂಡುಬಂತು. ಪಟಿಯಾಲಾ ಹೌಸ್ ಕೋರ್ಟ್ನ ಆವರಣದಲ್ಲಿ `ಪ್ರಜಾವಾಣಿ~ ಜತೆ ಮಾತನಾಡಿದ ಕನಿಮೊಳಿ, `ನೇರವಾಗಿ ನನ್ನ ಅಧಿಕೃತ ನಿವಾಸಕ್ಕೆ ತೆರಳುತ್ತೇನೆ. ಬಿಡುಗಡೆಗೊಂಡದ್ದಕ್ಕೆ ಯಾವ ಸಂಭ್ರಮಾಚರಣೆಯನ್ನೂ ಮಾಡುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.
`ವಿಚಾರಣೆ ವೇಳೆ ಹಾಜರಿರಲು ಕೋರ್ಟ್ ಸೂಚಿಸಿರುವುದರಿಂದ ಈಗ ಚೆನ್ನೈಗೆ ಹೋಗುವುದಿಲ್ಲ. ವಾರಾಂತ್ಯದಲ್ಲಿ ವಿಚಾರಣೆಗೆ ವಿರಾಮ ಇರುವಾಗ ಅಲ್ಲಿಗೆ ತೆರಳುತ್ತೇನೆ~ ಎಂದರು.
`ಕನಿಮೊಳಿ ಸಂಪೂರ್ಣ ನಿರ್ದೋಷಿಯಾಗಿ ಹೊರಬರುವ ತನಕ ಸಂಭ್ರಮಾಚರಣೆ ಇಲ್ಲ~ ಎಂದು ಡಿಎಂಕೆ ಸಂಸದ ಬಾಲು ಹೇಳಿದರು.