ದೇಶದ ಗಣ್ಯಾತಿಗಣ್ಯರು ಒಬ್ಬರ ಹಿಂದೊಬ್ಬರಂತೆ ಜೈಲು ಪಾಲಾಗುತ್ತಿರುವಾಗ (ಎಲ್ಲರೂ ಬಹುತೇಕ ದುಷ್ಟ ಅಪರಾಧಗಳಿಗಾಗಿಯೇ ಒಳ ಹೋಗುತ್ತಿದ್ದಾರೆ) ಕರ್ನಾಟಕದ ಕೊಡುಗೆಯೂ ಅದಕ್ಕೆ ಅಪಾರವಾಗಿ ಸಂದಾಯವಾಗುತ್ತಿರುವುದು ಚೋದ್ಯವೇ ಸರಿ.
ಜೈಲು ಹೊಸ್ತಿಲು ತುಳಿಯುತ್ತಿದ್ದಂತೆಯೇ ಈ ಮಹಾನುಭಾವರೆಲ್ಲರಿಗೂ ಇನ್ನಿಲ್ಲದ ಕಾಯಿಲೆಗಳು ದಿಢೀರನೆ ವಕ್ಕರಿಸಿಕೊಂಡು ತಕ್ಷಣವೇ ಆಸ್ಪತ್ರೆ ಸೇರಬೇಕೆನ್ನಿಸುವುದು ವಿಪರ್ಯಾಸ. ಸ್ಥಿತಿವಂತರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಸ್ಸಂಶಯವಾಗಿ ದಂಡನಾರ್ಹ.
ಮೇಲ್ನೋಟಕ್ಕೆ ಇದು ಎಲ್ಲರಿಗೂ ತಿಳಿಯುವಂತಿದ್ದರೂ ಯಾರೂ ಏನೂ ಮಾಡಲಾಗುತ್ತಿಲ್ಲ. ಈ ಮನೋಭಾವದ ಆರೋಪಿ ಮತ್ತು ಅಪರಾಧಿಗಳು ವೈದ್ಯಕೀಯ ದಾಖಲೆಗಳಿಗೆ ಇರುವ ಸೌಲಭ್ಯ ಹಾಗೂ ಕಾನೂನಿನ ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳಲು ವಕಾಲತ್ತು ವಹಿಸುವವರೇ ದಾರಿ ತೋರಿಸುತ್ತಿರುವುದು ನಮ್ಮ ಸಮಾಜ ನೈತಿಕವಾಗಿ ಸೊರಗಿರುವುದರ ಪ್ರತೀಕ.
ರಾಜ್ಯದ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿಗಳಲ್ಲಿ ಬಹಳಷ್ಟು ಜನರು ಆಸ್ತಮಾ, ಕ್ಯಾನ್ಸರ್, ಏಡ್ಸ್ ಹಾಗೂ ಇನ್ನಿತರೆ ಗುಣಪಡಿಸಲಾಗದಂತಹ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದನ್ನು ಎಷ್ಟೋ ವೇಳೆ ಜೈಲಿಗೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರೇ ಪತ್ತೆಹಚ್ಚಿದ್ದಾರೆ.
ಅಲ್ಲಿನ ಆಸ್ಪತ್ರೆಗಳನ್ನು ಸುಧಾರಿಸಲು ಸಲಹೆ ನೀಡಿದ್ದಾರೆ. ಹಾಗಿದ್ದರೂ ಈ ಬಡ ಕೈದಿಗಳ ಯೋಗಕ್ಷೇಮದ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಬಿಡುವಿಲ್ಲ. ಆದರೆ `ದೊಡ್ಡವರು~ ಜೈಲು ಸೇರುತ್ತಿದ್ದಂತೆಯೇ ಅವರಿಗೆ ವೈಭವೋಪೇತ ಸ್ವಾಗತ ನೀಡಿ ಅವರನ್ನು ನಿಜವಾದ `ಜೈಲು~ವಾಸದಿಂದ ಪಾರು ಮಾಡುತ್ತಿರುವುದನ್ನು ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಬೇಕು.