ಹೈದರಾಬಾದ್ (ಐಎಎನ್ಎಸ್): ಎಮ್ಮಾರ್-ಎಪಿಐಐಸಿ ಟೌನ್ಶಿಪ್ ಹಗರಣದ ಪ್ರಮುಖ ಆರೋಪಿ, ಅಮಾನತುಗೊಂಡಿರುವ ಆಂಧ್ರಪ್ರದೇಶದ ಗೃಹಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಬಿ.ಪಿ ಆಚಾರ್ಯ ಅವರನ್ನು ಗುರುವಾರ ಆಸ್ಪತ್ರೆಯಿಂದ ಚಂಚಲಗುಡ ಜೈಲಿಗೆ ವರ್ಗಾಯಿಸಲಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಸೋಮವಾರ ಬಂಧನಕ್ಕೊಳಗಾಗಿದ್ದ ಆಚಾರ್ಯ ಅವರನ್ನು ಸಿಬಿಐನ ವಿಶೇಷ ನ್ಯಾಯಾಲಯ ಫೆಬ್ರುವರಿ 15ರವೆರೆಗೆ ನ್ಯಾಯಾಂಗದ ವಶಕ್ಕೆ ಒಪ್ಪಿಸಿತ್ತು.
1983ನೇ ಸಾಲಿನ ಐಎಎಎಸ್ ಅಧಿಕಾರಿಯಾಗಿರುವ ಆಚಾರ್ಯ ಎದೆ ನೋವಿನ ಕಾರಣ ನೀಡಿ ಮಂಗಳವಾರ ನಿಜಾಮರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ನಿಮ್ಸ)ಗೆ ದಾಖಲಾಗಿದ್ದರು.
ಬುಧವಾರ ರಾತ್ರಿ ತಮ್ಮನ್ನು ಬಲವಂತವಾಗಿ ಆಸ್ಪತ್ರೆಯಿಂದ ಕರೆದೊಯ್ಯಲಾಗಿದೆ ಎಂದು ಆಚಾರ್ಯ ಆರೋಪಿಸಿದ್ದಾರೆ. ಆದರೆ ನ್ಯಾಯಾಧೀಶರು ಆಚಾರ್ಯರ ಆರೋಗ್ಯವನ್ನು ನೋಡಿಕೊಳ್ಳುವಂತೆ ಜೈಲಿನ ಆಡಳಿತಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಅವರನ್ನು ಚಂಚಲಗುಡ ಜೈಲಿಗೆ ವರ್ಗಾಯಿಸಲಾಗಿದೆ.