ಯಲ್ಲಾಪುರ: `ತೈಲ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬೆಲೆ ಏರಿಕೆಯಾಗುತ್ತಿರುವುದರಿಂದ ಜೈವಿಕ ಇಂಧನದ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಕಾರಣ ಜೈವಿಕ ಇಂಧನದ ಮೂಲಗಳಾದ ಹೊಂಗೆ, ಬೇವು, ಹಿಪ್ಪೆ, ಸುರಹೊನ್ನೆ, ಗೋಡಂಬಿ ಇತ್ಯಾದಿ ಗಿಡಗಳನ್ನು ನೆಟ್ಟು ಕೃಷಿಯ ಜೊತೆಗೆ ಪೂರಕ ಆದಾಯ ಹೆಚ್ಚಿಸಿಕೊಳ್ಳಬೇಕು' ಎಂದು ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಹೇಳಿದರು.
ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ಜೈವಿಕ ಇಂಧನ ಕುರಿತು ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. `ಬೀಜ ಸಂಗ್ರಹಣೆ ಬುಡಕಟ್ಟು ಜನರಿಗೆ ಪರಿಚಿತವಾದರೂ, ಅದನ್ನು ವ್ಯವಸ್ಥಿತವಾಗಿ ಮಾಡುವ ರೀತಿ ತಿಳಿಯದಿರುವುದು ಹಾಗೂ ಸರಿಯಾದ ಬೆಲೆ ಸಿಗದಿರುವುದರಿಂದ ಹಿನ್ನಡೆ ಉಂಟಾಗಿತ್ತು. ಆದರೆ ಈಗ ಬೀಜ ಸಂಗ್ರಹಣೆ ಒಂದು ಮಾರುಕಟ್ಟೆಯಾಗಿ ಪರಿವರ್ತನೆಯಾಗಿದ್ದು, ಅದನ್ನು ಬಳಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ' ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಶ್ರಿನಿವಾಸ್, `ಜೈವಿಕ ಇಂಧನ ಮೂಲಗಳಿಗೆ ಸರ್ಕಾರ ಕನಿಷ್ಟ ಬೆಲೆ ನಿಗದಿ ಮಾಡುತ್ತದೆ. ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು' ಎಂದರು.
ತಾ.ಪಂ. ಉಪಾಧ್ಯಕ್ಷ ಶಂಕರ ಕಣ್ಣಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ, ತಂತ್ರ ವಿದ್ಯಾಮಂಡಳಿಯ ಕಾರ್ಯದರ್ಶಿ ಡಾ.ಎಂ.ಪೃಥ್ವಿರಾಜ, ರಾಜ್ಯ ವಿಜ್ಞಾನ ಮತ್ತು ತಾಂತ್ರಿಕ ಪರಿಷತ್ನ ಸಂಯೋಜಕ ಡಾ.ಎಸ್.ಎನ್.ಸಂಡೂರ್, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ರವಿ ಸಿದ್ದಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಪಿ.ರಮಣ ಸ್ವಾಗತಿಸಿದರು. ಜೀವನ ವಿಕಾಸ್ ಟ್ರಸ್ಟ್ನ ಶಾಂತಾರಾಮ ಸಿದ್ದಿ ವಂದಿಸಿದರು.