ಗೌರಿಬಿದನೂರು: `ಬಿಜೆಪಿಯಲ್ಲಿ ಪಕ್ಷದ ಸಂಸ್ಕೃತಿ ಗೊತ್ತಿಲ್ಲದ ಕೆಲ ಜೊಳ್ಳು ನಾಯಕರಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಆ ಎಲ್ಲ ಜೊಳ್ಳು ನಾಯಕರನ್ನು ಹೊರ ಹಾಕಿ, ಗಟ್ಟಿ ಕಾಳುಗಳನ್ನು ಮಾತ್ರವೇ ಆಯ್ದುಕೊಂಡು ಸಮರ್ಥವಾಗಿ ಚುನಾವಣೆ ಎದುರಿಸುತ್ತೇವೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬಿಜೆಪಿ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, `ಪಕ್ಷದ ಸಂಸ್ಕೃತಿ ಗೊತ್ತಿಲ್ಲದ ಮತ್ತು ಬದ್ಧತೆಯಿಲ್ಲದ ಕೆಲವಷ್ಟು ಜೊಳ್ಳು ನಾಯಕರಿದ್ದಾರೆ. ಅಧಿಕಾರಕ್ಕಾಗಿ ಕಿತ್ತಾಡುವವರು ಇದ್ದಾರೆ. ಅಂಥವರನ್ನೆಲ್ಲ ಹೊರ ಹಾಕಿ ಗಟ್ಟಿಕಾಳುಗಳನ್ನು ಮಾತ್ರವೇ ಆಯ್ದುಕೊಳ್ಳುತ್ತೇವೆ. ಅಂತಹವರಿಕೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ನೀಡಿ ಸ್ಪರ್ಧೆಗೆ ಇಳಿಸಲಾಗುವುದು~ ಎಂದರು.
`ಬಿಜೆಪಿಯಲ್ಲಿನ ಗೊಂದಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಹತ್ತು-ಹದಿನೈದು ದಿನಗಳಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ಒಂದು ವೇಳೆ ಡಿಸೆಂಬರ್ನಲ್ಲಿ ಚುನಾವಣೆ ನಡೆದರೂ ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಿದ್ದಾರೆ. 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.
ಯಾರು ಜೊಳ್ಳು ?
ಬೆಂಗಳೂರು: `ಪಕ್ಷದಲ್ಲಿ ಜೊಳ್ಳು ಸೇರಿಕೊಂಡ ಕಾರಣ ಬಿಕ್ಕಟ್ಟು ಸೃಷ್ಟಿಯಾಗಿದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆಗೆ ಸಚಿವ ಎಂ.ಪಿ. ರೇಣುಕಾಚಾರ್ಯ ಭಾನುವಾರ ಕಟುವಾದ ಪ್ರತಿಕ್ರಿಯೆ ನೀಡಿದರು.
`ಪಕ್ಷದಲ್ಲಿ ಜೊಳ್ಳು ಯಾರು ಎಂಬುದನ್ನು ಈಶ್ವರಪ್ಪ ಸ್ಪಷ್ಟಪಡಿಸಲಿ. ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪಕ್ಷದ ಶಾಸಕರು ಇಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಎಡಕ್ಕೆ-ಬಲಕ್ಕೆ ನಿಂತಿದ್ದಾರೆ. ಇಂಥವರ ವಿರುದ್ಧ ಈಶ್ವರಪ್ಪನವರು ಮಾತನಾಡುತ್ತಿಲ್ಲ~ ಎಂದು ಛೇಡಿಸಿದರು.
ಅಡ್ಡಮತ ಚಲಾಯಿಸಿದ ಪಕ್ಷದ ಶಾಸಕರ ವಿರುದ್ಧ ಈಶ್ವರಪ್ಪ ಮೊದಲು ಕ್ರಮ ಜರುಗಿಸಲಿ ಎಂದು ರೇಣುಕಾಚಾರ್ಯ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.